ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭಾರಿ ಅಂತರಗಳ ಮತಗಳಿಂದ ಸೋಲಿಸಿದ ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಕೇವಲ 15 ವರ್ಷಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ ಈಗ ಸಂಸತ್ ಸದಸ್ಯರಾಗಿದ್ದಾರೆ.
ಮಾಲೂರು ತಾಲೂಕಿನ ಮುನಿಸ್ವಾಮಿ ಕಳೆದ ನಾಲ್ಕು ದಶಕಗಳಿಂದಲೂ ಬೆಂಗಳೂರಿನಲ್ಲಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಮುನಿಸ್ವಾಮಿ ಎಲ್ ಎಲ್ ಬಿ ಪದವಿಗೆ ಸೇರಿದರಾದರೂ ಪೂರ್ಣಗೊಳಿಸಿಲ್ಲ. ಇವರ ತಂದೆ ಯಾರೂ ಕೂಡಾ ರಾಜಕೀಯದಲ್ಲಿ ಇರಲಿಲ್ಲ. ಕೆಪಿಸಿಸಿ ಹಾಗೂ ಎನ್ ಎಸ್ ಯುಐನಲ್ಲಿ ಪದಾಧಿಕಾರಿಯಾಗಿಯೂ ಮುನಿಸ್ವಾಮಿ ಕೆಲಸ ಮಾಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮುನಿಸ್ವಾಮಿ, 2004ರಲ್ಲಿ ಸೀಗೆಹಳ್ಳಿ ಪಂಚಾಯಿತಿಯಿಂದ ಗೆದ್ದು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೆ. ನಂತರ ಮ್ಯಾಕ್ಸಿ ಕ್ಯಾಬ್ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಶಾಸಕ ಅರವಿಂದ ಲಿಂಬಾವಳಿ ಮನೆ ಮುಂಭಾಗ ಪ್ರತಿಭಟನೆ ನಡೆಸಿದ್ದೇವು. ಈ ಸಂದರ್ಭದಲ್ಲಿ ಲಿಂಬಾವಳಿ ಪ್ರಭಾವದಿಂದ ಬಿಜೆಪಿ ಸೇರಿಕೊಂಡಿದ್ದಾಗಿ ತಿಳಿಸಿದರು.
2014ರಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದ ಮುನಿಸ್ವಾಮಿ ಅವರನ್ನು 2015ರಲ್ಲಿ ಕಾಡುಗೋಡಿಯ ಪಾಲಿಕೆ ಚುನಾವಣೆಗೆ ಅರವಿಂದ್ ಲಿಂಬಾವಳಿ ಶಿಫಾರಸು ಮಾಡಿದ್ದರು. ನಂತರ 2015ರಲ್ಲಿ ಮೊದಲ ಬಾರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆದಿದ್ದರು. 2018ರಲ್ಲಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಮೈತ್ರಿ ಅಭ್ಯರ್ಥಿ ಸಂಪತ್ ರಾಜ್ ವಿರುದ್ಧ ಸೋತಿದ್ದರು.
ಮುನಿಯಪ್ಪ ವಿರುದ್ಧದ ಆಡಳಿತಾ ವಿರೋಧಿ ಅಲೆ ಅರಿತಿದ್ದ ಬಿಜೆಪಿ ಹೊರಗಡೆಯ ಅಭ್ಯರ್ಥಿ ಹಾಕಲು ನಿರ್ಧರಿಸಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಗೆದಿದ್ದರೂ ಕೂಡಾ ಬಿಬಿಎಂಪಿ ಕೌನ್ಸಿಲರ್ ಹುದ್ದೆಗೆ ರಾಜೀನಾಮೆ ಕೊಡಲು ಇಷ್ಟಪಡುತಿಲ್ಲ. ಸಂಸತ್ ಅಧಿವೇಶನದ ಸಂದರ್ಭದಲ್ಲೂ ಬಿಬಿಎಂಪಿ ಸಭೆಯಲ್ಲಿ ಭಾಗವಹಿಸುತ್ತೇನೆ. ಏಕಕಾಲದಲ್ಲಿ ಎರಡು ಹುದ್ದೆ ನಿರ್ವಹಿಸುವಂತಿಲ್ಲ ಎಂದು ಯಾವುದೇ ಕಾನೂನು ಹೇಳಿಲ್ಲ ಎಂದು ಅವರು ಹೇಳುತ್ತಾರೆ.
Advertisement