ಸಿದ್ದರಾಮಯ್ಯ ಕಾಂಗ್ರೆಸ್ ಗೆ ಶನಿ ಇದ್ದಂತೆ: ಜನಾರ್ಧನ ಪೂಜಾರಿ

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದ ಹಾಗೆ. ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿಯೇ ಹೋಗುತ್ತಾರೆ ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಟೀಕಿಸಿದ್ದಾರೆ.
ಜನಾರ್ಧನ ಪೂಜಾರಿ
ಜನಾರ್ಧನ ಪೂಜಾರಿ

ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದ ಹಾಗೆ. ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿಯೇ ಹೋಗುತ್ತಾರೆ ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಟೀಕಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಈ ಮಟ್ಟಕ್ಕೆ ಬರಲು ಕಾರಣವಾಗಿದೆ. ಸಿದ್ಧರಾಮಯ್ಯ ಅವರಿಗೆ ಯಾವುದೇ ಜವಾಬ್ದಾರಿ ನೀಡಬಾರದು ಎಂದು ಹಲವು ಬಾರಿ ಹೈಕಮಾಂಡ್ ಗೆ ತಾನು ಪತ್ರ ಬರೆದಿದ್ದೇನೆ. ಸಿದ್ಧರಾಮಯ್ಯ ಕಾಂಗ್ರೆಸ್ ನಲ್ಲಿ ಇರುವ ತನಕ ಪಕ್ಷಕ್ಕೆ ಅವರು ಶನಿಯೆ ಎಂದು ದೂರಿದರು.

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಸ್ಥಾನ ಆಯ್ಕೆ ಸಂಬಂಧ ತನ್ನ ಬಳಿ ಚರ್ಚೆ ನಡೆಸಲಾಗಿದೆ ಎನ್ನುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆಯನ್ನು ಖಂಡಿಸಿದ ಪೂಜಾರಿ, ಅಭ್ಯರ್ಥಿಗಳ ಆಯ್ಕೆ ಸಂಬಂಧ ತನ್ನ ಬಳಿ ಯಾರೂ ಯಾವ ಚರ್ಚೆಯನ್ನೂ ನಡೆಸಿಲ್ಲ. ಜಿಲ್ಲಾಧ್ಯಕ್ಷರು ಕೂಡಲೇ ಈ ಬಗ್ಗೆ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ನನ್ನಲ್ಲಿ ಸಮಾಲೋಚನೆ ಮಾಡಬೇಕೆಂದು ಯಾರಲ್ಲೂ ಹೇಳಿಲ್ಲ. ಈ ರೀತಿ ಸುಳ್ಳು ಹೇಳಬಾರದು. ಸತ್ಯಕ್ಕೆ ದೂರವಾದ ಮಾತನ್ನು ಕಾಂಗ್ರೆಸ್‌ನವರು ಹೇಳಬಾರದು. ಕಾಂಗ್ರೆಸ್‌ನವರು ಪೂಜಾರಿ ಬಳಿ ಸಮಾಲೋಚನೆ ಮಾಡುವುದಿಲ್ಲ. ಅದಕ್ಕಾಗಿ ಪೂಜಾರಿ ಕಣ್ಣೀರು ಸುರಿಸಿ ಕುಳಿತುಕೊಳ್ಳುವುದಿಲ್ಲ. ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ವಿಧಾನಸಭೆ, ಲೋಕಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ಹಿರಿಯರ ಕಡೆಗಣನೆ ಕಾರಣ. ಈ ಮಾತು ನೂರಕ್ಕೆ‌ ನೂರು ಸತ್ಯ, ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ" ಎಂದು ಘಂಟಾಘೋಷವಾಗಿ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com