ಬೆಂಗಳೂರು: ಹುಳಿಯಾರ್ ಕುರುಬ ಸಮುದಾಯದ ಶಾಖಾ ಮಠದ ಸ್ವಾಮೀಜಿ ವಿಚಾರದಲ್ಲಿ ಕೊನೆಗೂ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕುರುಬ ಸಮುದಾಯದ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಧುಸ್ವಾಮಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘಟನೆ ಬಗ್ಗೆ ಕ್ಷಮೆ ಯಾಚಿಸುವ ಪರಿಸ್ಥಿತಿ ನಿರ್ಮಾಣ ಆಗಿದ್ದರೆ, ನಾನು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಹುಳಿಯಾರ್ ಕುರುಬ ಸಮುದಾಯದ ಶಾಖಾ ಮಠದ ಸ್ವಾಮೀಜಿ ವಿಚಾರದಲ್ಲಿ ಸಚಿವ ಮಾಧುಸ್ವಾಮಿ ಒರಟಾಗಿ ವರ್ತಿಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇಂದು ಕುರುಬ ಸಮುದಾಯದ ಕ್ಷಮೆಯಾಚಿಸಿದ್ದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಮುಖ್ಯಮಂತ್ರಿಗಳಿಗೆ ಕ್ಷಮೆ ಕೇಳುವಷ್ಟು ನೋವಾಗಿದ್ದರೆ ವಿಷಾದಿಸುತ್ತೇನೆ ಎಂದಷ್ಟೇ ತಿಳಿಸಿದರು. ಆದರೆ ಅಸಂಖ್ಯಾತ ಕುರುಬ ಸಮದಾಯದ ಕ್ಷಮೆ ಕೋರಲು ಅವರು ಸ್ಪಷ್ಟವಾಗಿ ನಿರಾಕರಿಸಿದರು.
ಕಾಗಿನೆಲೆ ಶಾಖಾ ಮಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಸಚಿವ ಮಾಧುಸ್ವಾಮಿ ನಿಂದಿಸಿದ್ದು, ಇದಕ್ಕೆ ಪ್ರತಿಯಾಗಿ ಅವರು ತಮ್ಮ ಸಚಿವ ಸ್ಥಾನ ತ್ಯಜಿಸಿ ಸಮುದಾಯದ ಕ್ಷಮೆ ಕೋರಬೇಕು ಎಂದು ಹುಳಿಯಾರು ಪಟ್ಟಣದ ಕುರುಬರ ಸಂಘಗಳ ಒಕ್ಕೂಟ ಆಗ್ರಹಿಸಿದೆ.
ಇದಕ್ಕಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೆ ಹುಳಿಯಾರು ಪಟ್ಟಣ ಬಂದ್ ಮಾಡಲಾಗುವುದು. ಜನರು ಕೂಡ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಬೇಕ ಎಂದು ಕೂಡ ಒಕ್ಕೂಟ ಮನವಿ ಮಾಡಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರ್ ವೃತ್ತದಿಂದ ಕನಕದಾಸರ ಹೆಸರು ಕೈಬಿಟ್ಟಿರುವುದು ಈ ವಿವಾದಕ್ಕೆ ಮೂಲ ಕಾರಣ. 20 ವರ್ಷಗಳ ಹಿಂದೆ ಕನಕ ಯುವ ಸೇನೆಯ ಯುವಕರು ಹುಳಿಯಾರ್ ಸರ್ಕಲ್ಗೆ ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿದ್ದರು. ಕನಕದಾಸ ಸರ್ಕಲ್ ಎಂದು ಮರುನಾಮಕರಣ ಮಾಡಲು ಗ್ರಾಮಪಂಚಾಯಿತಿ ಸಭೆಯಲ್ಲಿ ಒಪ್ಪಿಗೆ ಕೂಡ ಸಿಕ್ಕಿತ್ತು.
ಇತ್ತೀಚೆಗೆ ಹೈವೇ ಕಾಮಗಾರಿ ಹಿನ್ನೆಲೆಯಲ್ಲಿ ಈ ಬೋರ್ಡ್ಅನ್ನು ತೆಗೆಯಲಾಗಿತ್ತು. ಈ ಕಾಮಾಗಾರಿ ಪೂರ್ಣಗೊಂಡಿದ್ದು, ಸರ್ಕಲ್ಗೆ ಮತ್ತೆ ಕನಕದಾಸರ ಹೆಸರನ್ನು ಹಾಕಲು ಮುಂದಾದಾಗ ಲಿಂಗಾಯತ ಸಮುದಾದಯದವರು ಡಾ. ಶಿವಕುಮಾರಸ್ವಾಮಿ ಹೆಸರಿಡಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರದಲ್ಲಿ ಭಾರೀ ಗಲಭೆ ಕೂಡ ಉಂಟಾಗಿತ್ತು. ಈ ವೇಳೆ ಕುರುಬ ಸಮುದಾಯದ ಪ್ರಭಾವಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಯನ್ನು ಮಾಧುಸ್ವಾಮಿ ನಿಂದಿಸಿದ್ದರು. ಅಲ್ಲದೆ, ಕ್ಷಮೆಯಾಚಿಸುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
Advertisement