ನವದೆಹಲಿ: ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪಿಸುತ್ತಿರುವ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಚುನಾಯಿತ ಪ್ರತಿನಿಧಿಗಳನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡಿಲ್ಲದ್ದೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಮೇಲ್ಮನೆ ಕಾಂಗ್ರೆಸ್ ಸದಸ್ಯ ಹೆಚ್.ಎಂ.ರೇವಣ್ಣ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ? ಕುಮಾರಸ್ವಾಮಿ ಬಳಿ ನಾನೇ ಏನಾದರೂ ಕೇಳಿದರೆ ಕೆಲಸ ಮಾಡುತ್ತಿರಲಿಲ್ಲ. ಬರಿ ಅಣ್ಣಾ ಏನಣ್ಣಾ ಎಂದು ಮಾತನಾಡಿ ಹಾಗೆಯೇ ಕಳುಹಿಸುತ್ತಿದ್ದರು. ಈಗ ತಮ್ಮ ತಪ್ಪನ್ನು ಸಿದ್ದರಾಮಯ್ಯ ಅವರ ಮೇಲೆ ಹೇರುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಕುಮಾರಸ್ವಾಮಿ ಸರಿಯಾಗಿ ನಡೆದುಕೊಂಡಿದ್ದರೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಕುಮಾರಸ್ವಾಮಿ ನಡವಳಿಕೆ ಬಗ್ಗೆ ಅವರ ಪಕ್ಷದ ಪ್ರಮುಖ ನಾಯಕರೇ ಆರೋಪಿಸಿದ್ದಾರೆ.ಅವರಿಗೆ ಜೆಡಿಎಸ್ ಪಕ್ಷದ ಶಾಸಕರನ್ನೇ ಸರಿಯಾಗಿ ನಡೆಸಿಕೊಳ್ಳುವುದಕ್ಕೆ ಆಗಲಿಲ್ಲ ಎಂದ ಮೇಲೆ ಇನ್ನೂ ಕಾಂಗ್ರೆಸ್ ಶಾಸಕರೊಂದಿಗಿನ ಅವರ ವರ್ತನೆ ಹೇಗಿರಬಹುದು ಎಂದು ಹೆಚ್.ಎಂ.ರೇವಣ್ಣ ಮಾತಿನ ಚಾಟಿ ಬೀಸಿದರು.
Advertisement