ಡಿಕೆ ಶಿವಕುಮಾರ್ ಬಂಧಿಸಿ ನಮ್ಮಲ್ಲಿ‌ ಯಾರನ್ನೂ ಹೀರೋ ಮಾಡುವ ಅಗತ್ಯ ಬಿಜೆಪಿಗಿಲ್ಲ: ಸಚಿವ ಮಾಧುಸ್ವಾಮಿ

ಮಾಜಿ ಸಚಿವ ಡಿಕೆ ಶಿವಕುಮಾರ ಅವರನ್ನು ಬಂಧಿಸಿ ಯಾರನ್ನೂ ಹೀರೋ ಮಾಡುವ ಅಗತ್ಯ ನಮಗೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ‌ ಪ್ರತಿಕ್ರಿಯಿಸಿದ್ದಾರೆ.
ಡಿಕೆ ಶಿವಕುಮಾರ್-ಮಾಧುಸ್ವಾಮಿ
ಡಿಕೆ ಶಿವಕುಮಾರ್-ಮಾಧುಸ್ವಾಮಿ

ಬೆಳಗಾವಿ: ಮಾಜಿ ಸಚಿವ ಡಿಕೆ ಶಿವಕುಮಾರ ಅವರನ್ನು ಬಂಧಿಸಿ ಯಾರನ್ನೂ ಹೀರೋ ಮಾಡುವ ಅಗತ್ಯ ನಮಗೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ‌ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು‌ ಬಂಧಿಸಿದ್ದಾರೆ. ಇದು ಸ್ವಾಭಾವಿಕ ಪ್ರಕ್ರಿಯೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಡಿ. ಕೆ.ಶಿವಕುಮಾರ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ನಮಗಿಲ್ಲ, ಅವರನ್ನು ಬಂಧನ ಮಾಡಿಸಿ ಹೀರೊ ಮಾಡಿಸುವ ಅಗತ್ಯನೇ ಇಲ್ಲ ಎಂದು‌ ಖಾರವಾಗಿ ಪ್ರತಿಕ್ರಿಯಿಸಿದರು.

ನಾವೇ ಮಾಡಿದ ಅಧಿಕಾರಿಗಳು, ನಾವೇ ಕಾನೂನು ರಚನೆ ಮಾಡಿದವರೇ ನಮ್ಮನ್ನು‌ ಬಂಧಿಸಿದ್ದಾರೆ ಎಂದು ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಹೊಣೆ ಎನ್ನುವುದು ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಿರುವುದು ಬಿಜೆಪಿ‌ ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಹಿರಿಯರು ಇರುತ್ತಾರೆ. ಆಯಾ ಜಿಲ್ಲೆ, ಪ್ರಾಂತ್ಯಗಳನ್ನು ನೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಎಲ್ಲವನ್ನು ಅಳೆದು ತೂಗಿ ಸಚಿವರನ್ನು ನೇಮಕ ಮಾಡಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಸಣ್ಣ ನೀರಾವರಿಗೆ ಸೇರಿದ ಕೆರೆಗಳಿಗೆ ಹಾನಿಯಾಗಿರುವ ಕುರಿತು ಸ್ವತಃ ತಾನೇ ಪರಿಶೀಲನೆ ನಡೆಸಲಿದ್ದು, ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಲಿದ್ದೇನೆ ಎಂದರು. ಕೇಂದ್ರ ಸರಕಾರ ನೆರೆ ಹಾನಿ ಪರಿಹಾರ ನೀಡುವಲ್ಲಿ ವಿಳಂಬ ಮಾಡಿಲ್ಲ. ನೆರೆಯಲ್ಲಿ ಕೊಚ್ಚಿ ಹೋದವರಿಗೆ ಪರಿಹಾರ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡುವುದರ ಕುರಿತು ಸಮಿತಿ ರಚನೆ ಮಾಡಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ಐದು ಎಕರೆ ಹೆಚ್ಚಿನ ಪ್ರಮಾಣದಲ್ಲಿ‌ ಜಮೀನು ಹೊಂದಿದವರಿಗೆ ಪರಿಹಾರ ಸಿಗುವುದು ಕಷ್ಟ.  ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಲಾಗುವುದು. ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ಎಲ್ಲಿ ತೊಂದರೆಯಾಗುತ್ತಿದೆ, ಎಲ್ಲಿ ಸಮಸ್ಯೆ ಇದೆ ಎಂಬುದನ್ನು ವಿರೋಧ ಪಕ್ಷದವರು ಸ್ಪಷ್ಟವಾಗಿ ಹೇಳಲಿ ಎಂದು ಪ್ರಶ್ನೆಯೊಂದಕ್ಕೆ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com