ಬೆಂಗಳೂರು; ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ್ ಅವರ ನಡುವೆ ಇದೀಗ ಬಹಿರಂಗವಾಗಿ ಮಾತಿನ ಚಕಮಕಿ ನಡೆಯುತ್ತಿರುವುದರ ಹಿಂದೆ ಭವಿಷ್ಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯಲು ಈ ಇಬ್ಬರು ನಾಯಕರ ನಡುವೆ ಇರುವ ಪೈಪೋಟಿಯೇ ಕಾರಣ ಎನ್ನಲಾಗುತ್ತಿದೆ.
ನನಗೆ ಮತ್ತು ನನ್ನ ಬಗ್ಗೆ ಯಾವುದೇ ಪೋನ್ ಕದ್ದಾಲಿಕೆ ವಿಚಾರ ಬಂದಿದಿಲ್ಲ. ಕೆಲ ಅಧಿಕಾರಿಗಳು ಅಂತದ್ದೇನಿಲ್ಲ ಎಂದರೆ ಕೆಲವರು ಸಣ್ಣ ಸಂಶಯವಿದೆ ಎಂದಿದ್ದರು. ಮೂರು ತಿಂಗಳಲ್ಲಿ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ. ಜತೆಗೆ ಡಿಕೆ ಶಿವಕುಮಾರ್ ಅವರಿಗೂ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಅದು ಯಾವ ಕಾರಣಕ್ಕೆ ದೇವೇಗೌಡರ ಕುಟುಂಬದ ಪರ ಒಲವು ತೋರಿಸುತ್ತಿದದಾರೋ ಗೊತ್ತಿಲ್ಲ. ಜಾತಿ ಆಧಾರದಲ್ಲಿ ರಾಜಕಾರಣ ಮಾಡಿ ಡಿಕೆಶಿ ಓಲೈಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಎಂಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಶಿವಕುಮಾರ್, ಮಾಜಿ ಗೃಹ ಸಚಿವರಿಗೆ ರಾಜಕಾರಣ ಮಾಡಬೇಕಿದೆ. ಹೀಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ, ಯಾರ ದೂರವಾಣಿಗಳು ಕದ್ದಾಲಿಕೆಯಾಗಿಲ್ಲ ಎಂದು ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಪ್ರಭಾವಿ ಸಮುದಾಯಗಳಿಗೆ ಸೇರಿದ ಈ ಇಬ್ಬರು ನಾಯಕರ ಹೆಸರು ಈ ಹಿಂದೆಯೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು. ಕುತೂಹಲಕಾರಿ ಸಂಗತಿಯೆಂದರೆ, ತಾನಾಗೆ ಬಂದಿದ್ದ ಈ ಅವಕಾಶವನ್ನು ಈ ಇಬ್ಬರೂ ನಾಯಕರು ಕಾಲ ಪಕ್ವವಾಗಿಲ್ಲ ಎಂಬ ಕಾರಣಕ್ಕೆ ನಿರಾಕರಿಸಿದ್ದರು. ಇದರ ಬದಲಾಗಿ ಸಚಿವ ಸ್ಥಾನವನ್ನೇ ಬಯಸಿದ್ದರು. ಆದರೆ, ಇದೀಗ ಪಕ್ಷ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಹತ್ವ ಬಂದಿದೆ.
Advertisement