ಬೆಂಗಳೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಷಯದ ಮೇಲಿನ ಚರ್ಚೆ ವೇಳೆ ರಾಜ್ಯಸಭೆಯ ಮಾಜಿ ಸದಸ್ಯರಿಬ್ಬರು ಪರಿಷತ್ ನಲ್ಲಿ ಪರಸ್ಪರ ದೆಹಲಿ ಗುಂಗಿನ ಬಗ್ಗೆ ಮಾತನಾಡಿ ರಾಷ್ಟ್ರೀಯ ನಾಯಕರ ಬಗ್ಗೆ ಪ್ರಸ್ತಾಪಿಸಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಸದನದಲ್ಲಿ ಅಸಂವಿಧಾನಿಕ ಪದ ಬಳಸಿದ ಘಟನೆ ನಡೆಯಿತು. ನಂತರ ಆ ಪದವನ್ನು ಕಡತದಿಂದ ತೆಗೆಯುವಂತೆ ಸಭಾಪತಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್, ಕೋರ್ಟ್ ನಲ್ಲಿ ವಿವಾದ ಇರುವಾಗ ಇಲ್ಲಿ ಅದನ್ನು ಹೇಗೆ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯ? ಕೋರ್ಟ್ ನಲ್ಲಿ ಬಾಕಿ ಇರುವ ಪ್ರಕರಣದ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಹಮತ ವ್ಯಕ್ತಪಡಿಸಿದರು. ನಾವೇ ನಿಯಮ ಮಾಡಿಕೊಂಡಿದ್ದೇವೆ ಎಂದರು.
ಆದರೆ ಇದಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ಮಂಡಿಸಿದಾಗಲೇ ಆಕ್ಷೇಪಣೆ ಮಾಡಬೇಕಿತ್ತು. ಚರ್ಚೆ ಅರ್ಧ ನಡೆದ ನಂತರ ಆಕ್ಷೇಪಣೆ ಸಲ್ಲದು. ಮೊದಲೇ ಏಕೆ ಪಾಯಿಂಟ್ ಆಫ್ ಆರ್ಡರ್ ರೈಸ್ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಮಧ್ಯದಲ್ಲಿ ಆಕ್ಷೇಪಣೆ ಮಾಡಬಾರದು ಎನ್ನುವುದೇನಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಕಂದಾಯ ಸಚಿವ ಆರ್.ಅಶೋಕ್, ಎಜಿ ಜೊತೆ ತಜ್ಞರ ಜೊತೆ ಚರ್ಚಿಸಿಯೇ ಬಿಲ್ ತರಲಾಗಿದೆ ಯಾವುದೇ ತೊಂದರೆ ಇಲ್ಲ. ವಿಧಾನಸಭೆಯಲ್ಲಿ ಎರಡು ದಿನ ಚರ್ಚೆ ಆಗಿದೆ. ಇಲ್ಲಿ ಬಂದಾಗ ಕಲಾಪ ಮುಂದೂಡಿಕೆಯಾಯ್ತು, ನಿನ್ನೆಯೂ ಬಂತು ಆದರೆ ಚರ್ಚೆ ಬಿಟ್ಟು ಹೊರಟುಬಿಟ್ಟಿರಿ ಎಂದು ಟಾಂಗ್ ನೀಡಿದರು.
ನಂತರ ಮಾತು ಮುಂದುವರೆಸಿದ ಬಿ.ಕೆ.ಹರಿಪ್ರಸಾದ್, ಬ್ರಿಟೀಷರು ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿದ್ದರು. ಬಲವಂತವಾಗಿ ಸ್ವಾಧೀನ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದರು. ಇದನ್ನು ತಿದ್ದುಪಡಿಮಾಡಿ ಉಳುವವನೇ ಒಡೆಯ ಎಂದು ಕಾಯ್ದೆ ರೂಪಿಸಲಾಗಿತ್ತು. ರಕ್ತರಹಿತ ಕ್ರಾಂತಿ ಅರಸು ಕಾಲದಲ್ಲಿ ಆಯಿತು. ಈಗ ಅಂತಹ ಕಾಯ್ದೆಯನ್ನು ಮತ್ತೆ ರೈತರಿಗೆ ಅನ್ಯಾಯವಾಗುವ ರೀತಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ಫ್ರೀಯಾಗಿ ಜಿಯೋ ಸಿಮ್ ಕೊಟ್ಟರು ಅದರಿಂದ ಬಿಎಸ್ಎನ್ ಎಲ್ ಮುಳುಗಿಹೋಯಿತು. ಮೂರು ತಿಂಗಳ ನಂತರ ದುಡ್ಡು ಕಟ್ಟಿರಿ ಎಂದರು. ಅದೇ ರೀತಿ ಈಗ ಭೂಮಿ ಖರೀದಿಗೆ 25 ಲಕ್ಷ ವಾರ್ಷಿಕ ಆದಾಯ ಇರಬೇಕು ಎಂದು ನಿಗದಿ ಮಾಡಿದ್ದೀರಿ ಇದನ್ನು ವಾಪಸ್ ಪಡೆದಾಗ ರೈತರ ಬಳಿ ಭೂಮಿ ಉಳಿಯಲು ಸಾಧ್ಯ ವಾಗುತ್ತಾ? ಮೊದಲು ಜಮೀನ್ದಾರಿ ಪದ್ದತಿ ವ್ಯವಸ್ಥೆ ಇತ್ತು. ಮತ್ತೆ ಅದೇ ಹಳೆ ಪದ್ದತಿಗೆ ವಾಪಾಸ್ ಕೊಂಡೊಯ್ಯುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಜಮೀನನ್ನು ವಶಕ್ಕೆ ಪಡೆಯಲಿವೆ. ಯಾವ ಬೆಳೆ ಬೆಳಯಬೇಕು ಎಂದು ಸಂಸ್ಥೆ ನಿಯಂತ್ರಣ ಮಾಡಲಿದೆ. ರೈತ ಕೂಲಿಗಾರನಾಗಿ ಕೆಲಸ ಮಾಡಬೇಕಾಗಲಿದೆ ಎಂದು ಹರಿಪ್ರಸಾದ್ ಹೇಳಿದರು.
ಯಡಿಯೂರಪ್ಪ ಸಿಎಂ ಆದಾಗಲೆಲ್ಲಾ ರೈತರಿಗೆ ಸಂಕಷ್ಟ ಬರಲಿದೆ. ಮೊದಲ ಬಾರಿ ಸಿಎಂ ಆದಾಗ ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ನಡೆದ ಗಲಾಟೆಯಲ್ಲಿ ಫೈರಿಂಗ್ ನಡೆದು ಆರು ಜನ ಮೃತಪಟ್ಟರು. ಆರು ಜನ ಸತ್ತಿಲ್ಲ ಎಂದರೆ ನಾನು ರಾಜಕೀಯ ಬಿಟ್ಟುಬಿಡುತ್ತೇನೆ ಎಂದು ಸವಾಲೆಸೆದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಹರಿಪ್ರಸಾದ್ ಕೂಡ ನನ್ನ ಹಾಗೆಯೇ ಇಲ್ಲಿಗೆ ಬಂದಿದ್ದಾರೆ. ಆದರೆ ದೆಹಲಿ ಗುಂಗಿನಿಂದ ಇನ್ನು ಹೊರ ಬಂದಿಲ್ಲ. ಅಲ್ಲಿ ಮಾತನಾಡ ಬೇಕಾಗಿದ್ದನ್ನು ಇಲ್ಲಿ ಮಾತನಾಡುತ್ತಿದ್ದಾರೆ. ಅದನ್ನೆಲ್ಲಾ ನಿಮ್ಮ ನಾಯಕರಲ್ಲಿ ಹೇಳಿ, ಇದು ಆ ಸ್ಥಳ ಅಲ್ಲ, ರಾಜ್ಯದ ಬಗ್ಗೆ ಮಾತನಾಡಿ ಎಲ್ಲಾ ತಂದು ಸುರಿಯಬೇಡಿ. ಸೀಮಿತವಾಗಿ ಮಾತನಾಡಿದರೆ ಕೇಳಲು ಸಿದ್ದ, ನೀವು ಮೋದಿ ಏನು ಮಾಡಿದರು ಅಂತಾ ಮಾತನಾಡಲು ಹೋದರೆ ನಾವು ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತೇವೆ ಎಂದರು.
ಇದಕ್ಕೆ ತಿರುಗೇಟು ನೀಡಿದ ಹರಿಪ್ರಸಾದ್, ನಾವು ಒಕ್ಕೂಟದಲ್ಲಿದ್ದೇವೆ. ವಿರೋಧ ಪಕ್ಷದವರು ಇಲ್ಲದಾಗ ಕಾನೂನು ತಂದಿದ್ದೀರಿ. ಈಗಲೂ ಸದನ ಕರೆಯಿರಿ ಮಾತನಾಡಲು ಸಿದ್ದರಿದ್ದೇವೆ. ಇಲ್ಲಿ ಮಾತನಾಡಬೇಡಿ ಎಂದರೆ ಹೇಗೆ? ಈ ಸದನವನ್ನು ಅಂತಹ ಸ್ಥಳ ಅಲ್ಲ ಅನ್ನುತ್ತಿದ್ದೀರಲ್ಲ. ನಿಮ್ಮ ಪ್ರಧಾನಿ ಸಂಸತ್ತನ್ನೇ ಅಂತಹ ಸ್ಥಳ ಮಾಡಿದ್ದಾರಲ್ಲ ಅದಕ್ಕೆ ಏನು ಹೇಳುತ್ತೀರಿ ಎಂದರು.
ವಾದ-ಪ್ರತಿವಾದ ನಡೆಯಿತು. ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ಸಭಾಪತಿ ಪೀಠದಲ್ಲಿದ್ದ ಮರಿತಿಬ್ಬೇಗೌಡ ಸದನವನ್ನು ಹೋಲಿಕೆ ಮಾಡಿ ಆಯನೂರು ಮಂಜುನಾಥ್ ಮತ್ತು ಹರಿಪ್ರಸಾದ್ ಬಳಸಿದ್ದ ಒಂದು ಪದವನ್ನು ಕಡತದಿಂದ ತೆಗೆದುಹಾಕಿ ರೂಲಿಂಗ್ ನೀಡಿದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಒಂದು ಬಿಲ್ ಬಗ್ಗೆ ಇಷ್ಟೊಂದು ಸತಾಯಿಸಿದ ಉದಾಹರಣೆ ಇಲ್ಲ. ಉತ್ತರ ನೀಡಲು ಸರ್ಕಾರ ಸಿದ್ದ ಇದೆ. ಉತ್ತರದ ನಂತರ ಬೇಕಿದ್ದಲ್ಲಿ ಮತ್ತೆ ಸ್ಪಷ್ಟೀಕರಣ ನೀಡಲಿದೆ. ಬರೀ ಎಳೆದುಕೊಂಡು ಹೋಗುತ್ತೀರಾ? ಉತ್ತರ ನೀಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಆದರೆ ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಅಪೇಕ್ಷಿತ ಎಲ್ಲರಿಗೂ ಮಾತನಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಯಾಕೆ ತರಾತುರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ.ಅಶೋಕ್, ಆರು ಬಾರಿ ಶಾಸಕರಾದ ನಾಯಕರಿಬ್ಬರು. ಇದು ಎಸಿ, ಕಂದಾಯ ಅಧಿಕಾರಿಗಳಿಗೆ ದುಡ್ಡು ಹೊಡೆಯುವ ಕಾನೂನು ಎಂದು ಹೇಳಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರು 79ಎ, ಬಿ ಓಬಿರಾಯನ ಕಾಲದ ಕಾನೂನು, ಇದನ್ನು ತೆಗೆದುಹಾಕಿ ಎಂದು ಹೇಳಿದ್ದರು. ಇದಕ್ಕೆ ದಾಖಲೆ ಇದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹರಿಪ್ರಸಾದ್, ಇದು ಅವರ ವೈಯಕ್ತಿಕ ಅಭಿಪ್ರಾಯ ಅದು. ಪಕ್ಷದ ಅಭಿಪ್ರಾಯ ಅಲ್ಲ ಎಂದರು ಈ ವೇಳ ಸದನದಲ್ಲಿ ಮತ್ತೆ ಗದ್ದಲದ ವಾತಾವರಣ ಸೃಷ್ಠಿಯಾಯಿತು. ಬಳಿಕ ಸಚಿವರು ಪ್ರಸ್ತಾಪಿಸಿದ ಸದಸ್ಯರ ಹೆಸರನ್ನು ಕಡತದಿಂದ ತೆಗೆದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿದರು.
ಜೆಡಿಎಸ್ ಮರಿತಿಬ್ಬೇಗೌಡ ಮಾತನಾಡಿ, ಇದು ಸುಧಾರಣಾ ಕಾಯ್ದೆಯಲ್ಲ ಇದು ಭೂ ಕಳ್ಳರ ಕಾಯ್ದೆ, ಯಡಿಯೂರಪ್ಪ ರೈತ ಚಳವಳಿಯಿಂದಲೇ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಅವರ ಹೋರಾಟ, ಚಳವಳಿ ಮೆಚ್ಚುತ್ತೇನೆ. ಯಡಿಯೂರಪ್ಪ ಸಿಎಂ ಆದಾಗ ರೈತರು ಸಂತಸ ಪಟ್ಟಿದ್ದರು. ನಾನೂ ಕೂಡ ಸಂತಸ ಪಟ್ಟಿದ್ದೆ. ರೈತರ ಶಾಲು ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಿರಿ, ಪ್ರತ್ಯೇಕ ಕೃಷಿ ಬಜೆಟ್ ಮಾಡಿದ್ದಿರಿ ಇದು ಇತಿಹಾಸ ಆದರೆ ಇಂತಹ ಹಿರಿಯ ಮೇಧಾವಿ, ಹೋರಾಟಗಾರ, ರೈತರ ಮಗ ಯಡಿಯೂರಪ್ಪ ಈ ರೀತಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ನೋವಿನ ಸಂಗತಿ ಎಂದರು.
79ಎ,ಬಿ ನಲ್ಲಿ ಎಷ್ಟು ಪ್ರಕರಣ ಬಂದಿವೆ. ಆ ಪ್ರಕರಣಗಳಲ್ಲಿ ಜಮೀನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು ಇದು ನಿಮ್ಮತಪ್ಪು ಎಂದು ಕೋರ್ಟ್ ಹೇಳಿದೆ. ಆ ಜಮೀನನ್ನು ಯಾಕೆ ಮುಟ್ಟುಗೋಲು ಹಾಕಿಲ್ಲ. 18 ಸಾವಿರ ಪ್ರಕರಣ ಇವೆ. ಮುಟ್ಟುಗೋಲು ಹಾಕಿಕೊಳ್ಳಬಹುದಿತ್ತು. ಆದರೆ ಈ ಸುಗ್ರೀವಾಜ್ಞೆಯಿಂದ ಅವರಿಗೆಲ್ಲಾ ಸಕ್ರಮ ಮಾಡಿ ಕೊಟ್ಟರು.ಇಂತಹ ಸಂದರ್ಭದಲ್ಲಿ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ನಾನು 8 ನೇ ತರಗತಿವರೆಗೂ ಹರಿದ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ.ರೈತರ ಕಷ್ಟ ನನಗೆ ಗೊತ್ತು.ಸಿಎಂ ಕೂಡ ರೈತರ ಸಮಸ್ಯೆ ಅರಿತವರೇ ಶೇ.70 ರಷ್ಟು ಸದಸ್ಯರು ರೈತ ಹಿನ್ನಲೆಯಲ್ಲಿ ಬಂದ ವರೇ ಆಗಿರಲಿದ್ದಾರೆ.ಹಿಂದೆ ರಾಷ್ಟ್ರಕವಿ ಕುವೆಂಪು ರೈತಗೀತೆ ರಚನೆ ಮಾಡಿ ರೈತರನ್ನ ಭವ್ಯ ಪರಂಪರೆಯಲ್ಲಿ ಸ್ವಾಮಿಗೆ ಹೋಲಿಕೆ ಮಾಡಿದ್ದಾರೆ.ರೈತ ಇಲ್ಲದೇ ಇದ್ದಲ್ಲಿ ದೇಶದ ಹಿತ ಸಾಧ್ಯವಿಲ್ಲ ಎಂದಿದ್ದಾರೆ.ಇಂದು ರೈತಗೀತ ಸರ್ಕಾರಿ ಕಾರ್ಯಕ್ರಮಲ್ಲಿ ಹಾಡಲಾಗುತ್ತದೆ ಆದರೆ ರೈತರ ಹಿತ ಕಾಯುತ್ತಿಲ್ಲ ಎಂದರು.
ಗೋವಿನ ರಕ್ಷಣೆಗೆ ನೆರವು ನೀಡಿ ಎಂದು ಬಂದ ಗೋ ಸಂರಕ್ಷಕರು ಸ್ವಾಮಿ ವಿವೇಕಾನಂದರನ್ನು ಕೋರಿದ್ದರು.ಅದಕ್ಕೆ ಸ್ವಾಮಿ ವಿವೇಕಾನಂದರು ಪ್ರತಿಕ್ರಿಯಿಸುತ್ತಾ ನನಗೂ ಗೋವಿನ ಬಗ್ಗೆ ಅನುಕಂಪ ಇದೆ ದಯಮಾಡಿ ಗೋಶಾಲೆ ಕಾರ್ಯಕ್ರಮ ಬದಿಗೊತ್ತಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ಮಾಡುವ ಕೆಲಸ ಮಾಡೋಣ ಎಂದು ಗೋರಕ್ಷಕರಿಗೆ ಕರೆ ನೀಡಿದ್ದರು.ಗೋ ಹತ್ಯೆ ನಿಷೇಧ ಅಂತೀರಲ್ಲ ಈ ಕಾಯ್ದೆ ತಂದರೆ ಒಂದು ಹಸುವೂ ಇರಲ್ಲ.ಎಲ್ಲ ಗೋವು ಮೇವಿಲ್ಲದೆ ಅವೇ ಸಾಯಲಿ ವೆ,ಕೋಳಿ,ಹಂದಿ ಸಾಕಾಣೆಯೂ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋರ್ಟಿನ ಮಧ್ಯಂತರ ಆದೇಶದ ನೆಪದಲ್ಲಿ ನ್ಯಾಯಲಯದ ಆದೇಶವನ್ನೇ ತಿರುಚಿ ಕಾನೂನು ರಚಿಸಿದರೆ.ಯಾವ ರಕ್ಷಣೆ ಸಿಗಲಿದೆ,ಮಧ್ಯಂತರ ಆದೇಶದ ವಿರುದ್ಧ ಮೇಲ್ಮನವಿ ಹೋಗದೇ ಇರುವುದು ಸರ್ಕಾರದ ದೊಡ್ಡ ಷಡ್ಯಂತ್ರವಾಗಿದೆ.ಕರಾಳ ಮರಣ ಶಾಸನವಾಗಲಿದೆ.ಹಾಗಾಗಿ ಬಿಲ್ ವಾಪಸ್ ಪಡೆಯುವಂತೆ ಮನವಿ ಮಾಡಿದರು.
Advertisement