ವಿಶ್ವನಾಥ್ ಅವರೇ ಬಾಂಬೆಯಲ್ಲಿ ಯಾವ ಮಿಠಾಯಿ ತಿಂದಿರಿ? ಜೆಡಿಎಸ್ ವ್ಯಂಗ್ಯ
ಮೈಸೂರು: ಬಿಜೆಪಿ ಮುಂಬೈನಲ್ಲಿ ನೀಡಿರುವ ಮಿಠಾಯಿ ಯಾವುದು ಎಂಬುದನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಬಹಿರಂಗಪಡಿಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ವಕ್ತಾರ ಎನ್.ಆರ್.ರವಿಚಂದ್ರೇಗೌಡ ಒತ್ತಾಯಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು ವಿಶ್ವನಾಥ್ ಅವರೇ ತಾವು ಕಾಂಗ್ರೆಸ್ ನಲ್ಲಿದ್ದಾಗ ಕಾಂಗ್ರೆಸ್ ನಮ್ಮ ತಾಯಿ ಅಂತ ಹೇಳುತ್ತಿದ್ದೀರಿ, ಜೆಡಿಎಸ್ ಗೆ ಬಂದಾಗ ದೇವೇಗೌಡರು ನಮ್ಮ ತಂದೆ ಸಮಾನವೆಂದು ಹೇಳುತ್ತಿದ್ದೀರಿ, ಈಗ ಬಿಜೆಪಿ ಪಕ್ಷಕ್ಕೆ ಹೋಗಿದ್ದೀರಿ, ಈಗ ಹೇಳಿ ತಮಗೆ ನರೇಂದ್ರ ಮೋದಿಯವರು ಏನಾಗಬೇಕು ಎಂದು ಪ್ರಶ್ನಿಸಿದರು. ಈಗ ತಾವುಯಾರ ಮಗು ಅಂತ ತಾವೇ ನಮಗೆ ತಿಳಿಸಿ. ತಾವೂ ಕೂಡ ಯಾರಿಗಾದರೂ ಮಗು ಆಗಲೇಬೇಕಲ್ಲವೇ ಎಂದು ವ್ಯಂಗ್ಯವಾಡಿದರು.
ನೀವು ಓರ್ವ ವಕೀಲನಾಗಿದ್ದು ಕಾನೂನಿನ ಜ್ಞಾನದ ಬಗ್ಗೆ ಅರಿವಿದ್ದರೂ ಸುಪ್ರೀಂಕೋರ್ಟ್ ನ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಮೇಲ್ಮನೆಗೆ ನಾಮನಿರ್ದೇಶನಗೊಂಡಿದ್ದೀರಿ, ಸುಪ್ರೀಂಕೋರ್ಟ್ 25/7/2019 ಮತ್ತು 28/07/2019ರ ತನ್ನ ಆದೇಶದಲ್ಲಿ ತಮ್ಮನ್ನು ಅನರ್ಹ ಶಾಸಕನೆಂದು ತೀರ್ಪು ನೀಡಿದೆ. ಈಗ ಹೈಕೋರ್ಟ್ ಕೂಡ ಸುಪ್ರೀಂಕೋರ್ಟ್ ನ ಆದೇಶವನ್ನು ಎತ್ತಿ ಹಿಡಿದಿದ್ದು ಅನರ್ಹ ಶಾಸಕನೆಂದು ತೀರ್ಪು ನೀಡಿದೆ. ನಿಮಗೆ ಸ್ವಾಭಿಮಾನವಿದ್ದರೆ ಕೋರ್ಟ್ ನ ಆದೇಶದ ಬಗ್ಗೆ ಗೌರವವಿದ್ದರೆ ಈ ಕೂಡಲೇ ತಮ್ಮ ನಾಮನಿರ್ದೇಶನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಗೌರವವನ್ನು ಉಳಿಸಿಕೊಳ್ಳಿ. ಇಲ್ಲದಿದ್ದಲ್ಲಿ ನ್ಯಾಯಾಲಯದಲ್ಲಿ ತಮ್ಮ ಮೇಲೆ ಹೋರಾಟ ಮಾಡುವ ಮೂಲಕ ನಿಮ್ಮನ್ನು ವಜಾ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ