ಮೇಲ್ಮನೆಯಲ್ಲಿ ನಡೆದ ಘಟನೆಯೇ ಧರ್ಮೇಗೌಡ ಸಾವಿಗೆ ಕಾರಣ: ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಇಂದಿನ ರಾಜಕೀಯದ ಘಟನೆಯೇ ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣ‌. ಇವರ ಸಾವು ರಾಜಕೀಯದ ಘಟನೆಗಳಿಂದಾದ ಕೊಲೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Updated on

ಬೆಂಗಳೂರು: ಇಂದಿನ ರಾಜಕೀಯದ ಘಟನೆಯೇ ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣ‌. ಇವರ ಸಾವು ರಾಜಕೀಯದ ಘಟನೆಗಳಿಂದಾದ ಕೊಲೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜಕೀಯ ಇಂದಿರುತ್ತದೆ ನಾಳೆ ಹೋಗುತ್ತದೆ‌‌. ಯಾರಿಗೂ ಅಧಿಕಾರ ಶಾಶ್ವತವಲ್ಲ. ಮಾನ ಮರ್ಯಾದೆಯಿಲ್ಲದೇ ಹಲವಾರು ರೀತಿಯ ಕಾನೂನು ಉಲ್ಲಂಘಿಸಿ ರಾಜ್ಯವನ್ನು ಲೂಟಿ ಮಾಡಿದವರೂ ಆರಾಮಾಗಿ ಜೀವಿಸುತ್ತಿದ್ದಾರೆ. ಆದರೆ ಸೂಕ್ಷ್ಮಜೀವಿಗಳಂತಹ ಧರ್ಮೇಗೌಡರು ಬಲಿಯಾಗಿದ್ದಾರೆ‌‌. ಮೇಲ್ಮನೆಯಲ್ಲಿ ನಡೆದ ಘಟನೆಯೇ ಉಪಸಭಾಪತಿಗಳ ಸಾವಿಗೆ ಕಾರಣರಾಗಿದ್ದಾರೆ. ಘಟನೆಗೆ ಯಾರ್ಯಾರು ಕಾರಣರೆಂಬ ಸತ್ಯಾಂಶ ಹೊರಬರಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಸದನದ ನಿಯಮಗಳ ವಿರುದ್ಧ ಒತ್ತಡಗಳಿಗೆ ಮಣಿಯಬೇಡ ಎಂದು ಉಪಸಭಾಪತಿ‌ ಧರ್ಮೇಗೌಡರಿಗೆ ದೇವೇಗೌಡರು ಸೇರಿದಂತೆ ನಾನು ಸಹ ಹೇಳಿದ್ದೆ. ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀಯವರಿಗೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಉಪಸಭಾಪತಿ ಧರ್ಮೇಗೌಡ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸುವಂತೆ ನೋಟಿಸ್ ನೀಡಿದ್ದರು.

ಮಹಾಲಕ್ಷ್ಮೀ ಅವರಿಗೆ ಪ್ರತಾಪ್‌ ಚಂದ್ರ ಶೆಟ್ಟಿಯವರ ನೋಟಿಸ್‌ಗೆ ಉತ್ತರ ಕೊಡಲಾಗದೇ ಒಂದೂವರೆ ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಧರ್ಮೇಗೌಡರ ಸಾವಿಗೆ ಘಟನೆಗೆ ಕಾರಣರಾದವರು ತಮ್ಮತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಧರ್ಮೇಗೌಡ ಹೆಸರಿಗೆ ತಕ್ಕಂತೆಯೇ ಧರ್ಮರಾಯರಾಗಿದ್ದರು. ಸಹೋದರನ ಸಾವಿನಿಂದ ಭೋಜೇಗೌಡ ಬಹಳ ನೊಂದಿದ್ದಾರೆ‌. ಆತ್ಮೀಯ ಸಜ್ಜನಿ ಧರ್ಮೇಗೌಡನನ್ನು ಕಳೆದುಕೊಂಡು ಬಹಳ ದುಃಖವಾಗಿದೆ ಎಂದು ಕುಮಾರಸ್ವಾಮಿ ಕಣ್ಣೀರಿಟ್ಟು ಮೃತರ ಆತ್ಮಕ್ಕೆ ಶಾಂತಿಕೋರಿದರು.

ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆ ರಾಜಕೀಯ ಘಟನೆಯಿಂದಾದ ಕೊಲೆ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಹೇಳಿಕೆ ದುರುದ್ದೇಶಪೂರಿತವಾಗಿದ್ದು, ಅದಕ್ಕೆಲ್ಲ ಪ್ರತಿಕ್ರಿಯಿಸುವುದಿಲ್ಲ. ಸಭಾಪತಿ ಪೀಠದ ಮೇಲೆ ಉಪಸಭಾಪತಿ ಧರ್ಮೇಗೌಡರನ್ನು ಬಿಜೆಪಿ-ಜೆಡಿಎಸ್ ಸೇರಿ ಬಲವಂತವಾಗಿ ಕೂರಿಸಿದ್ದು ಧರ್ಮೇಗೌಡರಿಗೆ ಇಷ್ಟವಿರಲಿಲ್ಲ ಎಂದು ತಿರುಗೇಟು ನೀಡಿದರು. ತಮಗೆ ಆಪ್ತ ಸ್ನೇಹಿತನಾಗಿದ್ದ ಧರ್ಮೇಗೌಡ ಅವರ ತಂದೆಯವರ ಕಾಲದಿಂದಲೂ ಕುಟುಂಬದ ಪರಿಚಯವಿದೆ. 

ತಳಮಟ್ಟದಿಂದ‌ ರಾಜಕರಣ ಮಾಡಿಕೊಂಡ ಬಂದಿದ್ದ ಧರ್ಮೇಗೌಡ ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಅವರ ತಂದೆ ಎಸ್.ಆರ್.ಲಕ್ಷ್ಮಯ್ಯ ಸಹ ಆಪ್ತಸ್ನೇಹಿತರಾಗಿದ್ದವರು. ರೈತಪರ, ಜನಪರ ಕಾಳಜಿಯುಳ್ಳ ವ್ತಕ್ತಿ ಅಗಲಿರುವುದು ಸಾರ್ವಜನಿಕ ಕ್ಷೇತ್ರಕ್ಕೆ ಆದ ಅಪಾರ ನಷ್ಟ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುವುದಾಗಿ ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com