ಬೆಂಗಳೂರು: ದಾವೋಸ್ ಪ್ರವಾಸ ರದ್ದುಗೊಳಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ವಿಸ್ತರಣೆ ಮುಂದಿನ ವಾರ ನಡೆಯಲಿದೆ ಎಂದು ಹೇಳಲಾಗಿದೆ. ಜನವರಿ 18 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಲಿದ್ದು ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಜನವರಿ 15 ರಂದು ಮಕರ ಸಂಕ್ರಾಂತಿ ಇದ್ದು ಧನುರ್ಮಾಸ ಮುಗಿಯಲಿದೆ ಹೀಗಾಗಿ 17 ಅಥವಾ 18ರಂದು ನೂತನ ಸಚಿವರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಲಿದೆ. ಸಿಎಎ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹುಬ್ಬಳ್ಳಿಯಲ್ಲಿ ನಡೆಯುವ ರ್ಯಾಲಿಯಲ್ಲಿ ಅಮಿತ್ ಶಾ ಪಾಲ್ಗೋಳ್ಳಲಿದ್ದಾರೆ ಎಂದು ಪಕ್ಷದ ವಕ್ತಾರ ಜಿ.ಮಧುಸೂದನ್ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚಿಸಿ ಸಮ್ಮತಿ ಪಡೆಯಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಹೆಚ್ಚುವರಿ ನೆರೆ ಪರಿಹಾರಕ್ಕೆ ಬೇಡಿಕೆ ಸಲ್ಲಿಸುವುದು, ರಾಜ್ಯದ ಯೋಜನೆಗಳಿಗೆ ನೆರವು ಕೇಳುವುದೂ ಸಿಎಂ ಅವರ ಈ ಪ್ರವಾಸದ ಕಾರ್ಯಸೂಚಿಯಲ್ಲಿಇರಲಿದೆ.
ಸಣ್ಣ ಪ್ರಮಾಣದ ಸಂಪುಟ ಪುನಾರಚನೆಯ ಚರ್ಚೆ ನಡೆಯುತ್ತಿದ್ದರೂ ಸರಕಾರ ರಚನೆಯಾಗಿ 6 ತಿಂಗಳೂ ಆಗಿಲ್ಲ. ಹಾಗಾಗಿ ಯಾರಿಗೂ ಕೊಕ್ ನೀಡುವುದು ಬೇಡವೆಂಬ ನಿಲುವಿಗೆ ಬಂದಿರುವ ಸಿಎಂ ಬಿಎಸ್ವೈ, ಹೊಸ ಶಾಸಕರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲಿದ್ದಾರೆ.
ಹೊಸಬರಲ್ಲಿ 11 ಮಂದಿ ಮಂತ್ರಿಗಳಾಗಲಿದ್ದಾರೆ. ಮೂಲ ಬಿಜೆಪಿಯ ಶಾಸಕರಲ್ಲೂ 2-3 ಮಂದಿಗೆ ಅವಕಾಶ ನಿರೀಕ್ಷಿಸಲಾಗಿದೆ. ಬಿಎಸ್ವೈ ಸಂಪುಟದಲ್ಲಿ 16 ಸ್ಥಾನಗಳು ಖಾಲಿಯಿದ್ದು, ಈ ಪೈಕಿ 14 ಸ್ಥಾನ ಭರ್ತಿ ಮಾಡುವ ಯೋಚನೆಯಿದೆ. 2 ಸ್ಥಾನಗಳನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ನಡುವೆಯೂ ದಿಲ್ಲಿಯ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನ ಆಧರಿಸಿ ಸಂಪುಟದಲ್ಲಿ ಬದಲಾವಣೆಯೂ ಆಗಬಹುದು ಎನ್ನಲಾಗುತ್ತಿದೆ.
Advertisement