ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್‌ ಸಮಾವೇಶ; ಜಿಟಿಡಿ, ಗುಬ್ಬಿ ಶ್ರೀನಿವಾಸ್, ಮಧು ಬಂಗಾರಪ್ಪ ಗೈರು!

ಲೋಕಸಭಾ ಉಪಚುನಾವಣೆ ಸೋಲಿನ‌ ಬಳಿಕ ಕುಂದಿರುವ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ‌ ನಗರದ ಅರಮನೆ ಮೈದಾನದಲ್ಲಿ‌ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಮಾವೇಶ ನಡೆಸಲಾಯಿತು.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
Updated on

ಬೆಂಗಳೂರು: ಲೋಕಸಭಾ ಉಪಚುನಾವಣೆ ಸೋಲಿನ‌ ಬಳಿಕ ಕುಂದಿರುವ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ‌ ನಗರದ ಅರಮನೆ ಮೈದಾನದಲ್ಲಿ‌ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಮಾವೇಶ ನಡೆಸಲಾಯಿತು.

ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಎಚ್‌‌.ಕೆ.ಕುಮಾರಸ್ವಾಮಿ, ಮುಖಂಡರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶಂಪೂರ, ಮೇಲ್ಮನೆ ಸದಸ್ಯರಾದ ಬಿ.ಎಂ.ಫಾರೂಖ್, ರಮೇಶ್‌ಗೌಡ, ಶರವಣ ಸೇರಿದಂತೆ‌ ಮತ್ತಿತರರು ಪಾಲ್ಗೊಂಡಿದ್ದರು. ಆದರೆೆ ಪ್ರಮುಖ ನಾಯಕರಾದ ಶಾಸಕ ಜಿಟಿ ದೇವೇಗೌಡ, ಗುಬ್ಬಿ ಶ್ರೀನಿವಾಸ್ ಮತ್ತು ಮಧು ಬಂಗಾರಪ್ಪ ಗೈರು ಎದ್ದು ಕಾಣುತ್ತಿತ್ತು.

ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಪ್ರಾಸ್ತಾವಿಕ ಮಾತನಾಡಿ, ಎಚ್.ಡಿ.ದೇವೇಗೌಡರು ಪಕ್ಷದ ಅದ್ಯಮ ಚೇತನ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಸ್ವರ್ಗಕ್ಕೆ ಮೂರೇಗೇಣುವಂತೆ‌ ನಡೆದುಕೊಳ್ಳುತ್ತಿವೆ.

ಆದರೆ ಜನರ ಸಮಸ್ಯೆಗಳನ್ನು ಪರಿಹರಿಸದೆ, ರೈತರ ಕಷ್ಟಗಳಿಗೆ ನೆರವಾಗದೇ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡದೇ ಜನರ ಭಾವನೆಗಳ ಮೇಲೆ ಬಲವಂತದ ಪ್ರಯೋಗಗಳನ್ನು ನಡೆಸುತ್ತಿವೆ‌. ಮುಖ್ಯಮಂತ್ರಿಯ ಯಡಿಯೂರಪ್ಪ ಅವರ ಸ್ಥಿತಿ ಪ್ರಧಾನಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತಿಂಗಳಾನುಗಟ್ಟಲೆ ಕಾಯಬೇಕಾದ ದುಃಸ್ಥಿತಿ ಇದೆ.

ಸರ್ಕಾರ ರಚನೆಗೆ 28 ಸಂಸದರನ್ನು ನೀಡಿದ ಕರ್ನಾಟಕದ ಸ್ಥಿತಿ ಏನಾಗಿದೆ ಎಂಬುದನ್ನು ಊಹಿಸಬಹುದು ಎಂದು ಯಡಿಯೂರಪ್ಪ ಅವರನ್ನು ತಿವಿದರು.

ಪಕ್ಷ ಸಂಕಷ್ಟದಲ್ಲಿರುವುದು ನಿಜವಾದರೂ. ಪಕ್ಷವನ್ನು ಗಟ್ಟಿಗೊಳಿಸಬಲ್ಲ ದೇವೇಗೌಡರು ಕ್ರಿಯಾಶೀಲತೆಗೆ ಹೆಚ್.ಡಿ.ಕುಮಾರಸ್ವಾಮಿ ಇದ್ದಾರೆ. ದೆಹಲಿಯಲ್ಲಿ ಪ್ರಾದೇಶಿಕ ಪಕ್ಷ ಆಮ್ಆದ್ಮಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.

ಆದರೆ ಕೇಜ್ರಿವಾಲ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಬಾರದು ಎಂದು ತಡೆಯಲು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಕನ್ನಡ ಭಾಷೆ‌ ನೆಲ‌ ಜಲ‌ ಉಳಿಸಲು ಇರುವ ಪಕ್ಷವೆಂದರೆ ಅದು ಜೆಡಿಎಸ್ ಮಾತ್ರ. ದೆಹಲಿಯಲ್ಲಿ ಆಮ್‌ಆದ್ಮಿ ಸಾಧ್ಯವಾಗುತ್ತದೆ ಎಂದರೆ ಕರ್ನಾಟಕದಲ್ಲಿ ಜೆಡಿಎಸ್ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ವಿಧಾನಸಭಾ ಚುನಾವಣೆ ಇನ್ನೂ ಮೂರೂವರೆ ವರ್ಷ ಇಲ್ಲ.

ನಾಳೆ ಆಗಲೀ ಯಾವಾಗ ಬೇಕಾದರೂ ಎದುರಾಗಬಹುದು. ಜೆಡಿಎಸ್ ಮಾತ್ರ‌ ಕಷ್ಟದಲ್ಲಿದೆ ಎಂದು ಭಾವಿಸಬೇಡಿ. ಕಾಂಗ್ರೆಸ್ ಸಹ ತೊಂದರೆಯಲ್ಲಿದೆ. ಸರ್ಕಾರದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ‌ ಎಂದರು.

ವಿಧಾನಸೌಧದ ಕೊಠಡಿಗಳು ನೊಣ ಹೊಡೆಯುತ್ತಿರುವುದನ್ನು ನೋಡಿದರೆ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದೆಂಬುದನ್ನು ಜನರು ಸಹ ಊಹಿಸಿದಂತಿದೆ. ಹೀಗಾಗಿ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಬೇಕು ಎಂದು ಕರೆ ನೀಡಿದರು. ಮೈಸೂರಿನ ಮಹಾಪೌರ ತಸ್ಲೀಮಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com