ಕಲಬುರಗಿ: ಸಂಪುಟ ವಿಸ್ತರಣೆ ವೇಳೆ ಡಿಸಿಎಂ ಹುದ್ದೆಗೆ ಬಲವಾದ ಸ್ಪರ್ಧಿಯಾಗಿದ್ದ ಆರೋಗ್ಯ ಸಚಿವ ಬಿ ಶ್ರೀರಾಮುಲು ತಾವು "ಬಿಜೆಪಿಯ ಶಿಸ್ತಿನ ಸಿಪಾಯಿ" ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸಿದ್ದ ಶ್ರೀರಾಮುಲು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗುತ್ತೇವೆ ಬಂಡಾಯದ ಪ್ರಶ್ನೆಯೇ ಇಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವಂತೆ ವಾಲ್ಮೀಕಿ ಸಮುದಾಯದ ಮಠಾಧೀಶರು ಮುಖ್ಯಮಂತ್ರಿಯ ಮೇಲೆ ಒತ್ತಡ ಹೇರಿರುವ ಬಗೆಗೆ ಕೇಳಿದಾಗ "ಸಮುದಾಯವು ಏನು ಹೇಳುತ್ತಿದೆ ಎಂಬುದನ್ನು ಮಠಾಧೀಶರು ಹೇಳುತ್ತಿದ್ದಾರೆ, ಆದರೆ ನಾನು ಪಕ್ಷದ ನಿರ್ಧಾರವನ್ನು ಪಾಲಿಸುತ್ತೇನೆ" ಎಂದರು. ಇನ್ನು ಶ್ರೀರಾಮುಲು ಡಿಸಿಎಂ ಹುದ್ದೆ ಆರಿಸಿಕೊಳ್ಳುತ್ತಾರೆಯೇ ಅಥವಾ ವಾಲ್ಮೀಕಿ ಸಮುದಾಯದ ಕೋಟಾ ಹೆಚ್ಚಳ ಮಾಡಲು ಒಲವು ತೋರಲಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು "ಎರಡೂ ವಿಷಯಗಳು ಸಂಪೂರ್ಣವಾಗಿ ಭಿನ್ನವಾಗಿವೆ" ಎಂದಿದ್ದಾರೆ.
"ವಾಲ್ಮೀಕಿ ಸಮುದಾಯಮೀಸಲಾತಿಯನ್ನು ಶೇಕಡ 7.5 ಕ್ಕೆ ಹೆಚ್ಚಿಸುವ ಬೇಡಿಕೆ ಬಹುಕಾಲದಿಂದ ಬಾಕಿ ಇದೆ. , ಈ ವಿಷಯವನ್ನು ಅಧ್ಯಯನ ಮಾಡುವ ಕಾರ್ಯವನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಗೆ ವಹಿಸಲಾಗಿದೆ. ಸಮಿತಿ ತನ್ನ ವರದಿಯನ್ನು ಸಲ್ಲಿಸಿದ ನಂತರ, ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ" ಎಂದು ಅವರು ಹೇಳಿದರು.
ಕೆಲವು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಸಮಸ್ಯೆ ಹೆಚ್ಚುತ್ತಿರುವ ಬಗೆಗೆ ಕೇಳಲಾದ ಪ್ರಶ್ನೆಗೆ ಉತ್ತಮ ಆರೋಗ್ಯ ಸೇವೆ ನೀಡಲು ರಾಜ್ಯದಲ್ಲಿ 63 ವಿಶೇಷ ಮದರ್-ಬೇಬಿ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಜನರಿಗೆ ತಕ್ಷಣ ವೈದ್ಯಕೀಯ ನೆರವು ಪಡೆಯಲು ಸಹಾಯ ಮಾಡಲು, ಕೆಪಿಎಸ್ಸಿನಿಂದ ನೇರವಾಗಿ ವೈದ್ಯರನ್ನು ನೇಮಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಶೀಘ್ರದಲ್ಲೇ ಸುಮಾರು 2000 ವೈದ್ಯರನ್ನು ನೇಮಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು.
Advertisement