ಬೆಂಗಳೂರು : ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಲಿದೆ.
ಒಟ್ಟು 7 ಸದಸ್ಯರನ್ನು ವಿಧಾನಪರಿಷತ್ಗೆ ಆಯ್ಕೆ ಮಾಡಬೇಕು. ಬಿಜೆಪಿ 4 ಸ್ಥಾನಗಳಲ್ಲಿ ಸುಲಭವಾಗಿ ಜಯಗಳಿಸಲಿದೆ. ಇದರ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 5 ಗಣ್ಯರನ್ನು ಪರಿಷತ್ಗೆ ನಾಮ ನಿರ್ದೇಶನ ಮಾಡಲು ಬಿಜೆಪಿಗೆ ಅವಕಾಶ ಸಿಕ್ಕಿದೆ.
ಹೀಗಾಗಿ 4 ಸ್ಥಾನಗಳನ್ನು ಆಯ್ಕೆ ಮಾಡಲು ಸಿಎಂ ಯಡಿಯೂರಪ್ಪಗೆ ಅವಕಾಶ ನೀಡಲಾಗಿದ್ದು, ಉಳಿದ ಐದು ನಾಮ ನಿರ್ದೇಶನ ಸದಸ್ಯರ ಆಯ್ಕೆಯನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ ಎಂದು ಹೇಳಲಾಗಿದೆ. ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಜೂನ್ 18 ಕೊನೆಯ ದಿನವಾಗಿದೆ. ಆದ್ದರಿಂದ ಬಿಜೆಪಿ ಮುಂದಿನ ವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
ಒಟ್ಟು 9 ಸದಸ್ಯರು ಬಿಜೆಪಿ ಮೂಲಕ ಪರಿಷತ್ ಪ್ರವೇಶ ಮಾಡಲಿದ್ದಾರೆ. ಆದ್ದರಿಂದ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ರಾಜ್ಯಸಭೆ ಚುನಾವಣೆಯಲ್ಲಿ ಆದಂತೆ ಕೊನೆ ಕ್ಷಣದಲ್ಲಿ ಅಚ್ಚರಿಯ ಹೆಸರು ಘೋಷಣೆಯಾಗಲಿದೆಯೇ? ಎಂಬ ಭಯ ಕೂಡ ಟಿಕೆಟ್ ಆಕಾಂಕ್ಷಿಗಳಲ್ಲಿ ಇದೆ.
ಬಿಜೆಪಿ ವಿಧಾನಸಭೆ ಸದಸ್ಯರ ಸಂಖ್ಯೆ 117, ಇದರ ಜೊತೆಗೆ ಪಕ್ಷೆತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬೆಂಬಲ ಕೂಡ ಬಿಜೆಪಿಗಿದೆ. ಹೀಗಾಗಿ ನಾಲ್ಕು ಅಭ್ಯರ್ಥಿಗಳನ್ನು ಗೆಲ್ಲಲು ಬಿಜೆಪಿ ಶಕ್ತವಿದೆ. ನಾಮ ನಿರ್ದೇಶನವಾಗಬೇಕಾದ 5 ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಹೈಕಮಾಂಡ್ ಗೆ ರವಾನಿಸಲಾಗಿದೆ.
ಸಾಧನೆ ಮಾಡಿರುವ ಐವರ ಹೆಸರನ್ನು ಶಾರ್ಟ್ ಲಿಸ್ಚ್ ಮಾಡಲಾಗಿದೆ. ಪಕ್ಷದ ತತ್ವ ಸಿದ್ಧಾಂತದ ಆಧಾರದ ಮೇಲೆ ನಾಮ ನಿರ್ದೇಶತ ಸದಸ್ಯರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇತರ ಪಕ್ಷಗಳಿಗೆ ತೊಂದರೆಯಾಗದಂತೆ ರಾಜ್ಯಸಭಾ ಚುನಾವಣೆ ಮಾದರಿಯಲ್ಲೇ ಪರಿಷತ್ ಚುನಾವಣೆಗೆ ಹೋಗಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಕಾರ್ಯತಂತ್ರವು ಯಾರ ಜೊತೆಗೂ ಘರ್ಷಣೆಯಾಗದಂತೆ ನಡೆದುಕೊಳ್ಳುವುದಾಗಿದೆ. ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳು ಜೆಡಿಎಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ದೇವೇಗೌಡರ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಕೋರಲಾಗುವುದೆಂದು ಈ ಮೊದಲು ಹೇಳಲಾಗಿತ್ತು, ಆದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂದು ಹೇಳಲಾಗುತ್ತಿದೆ. ಮೊದಲ ಪ್ರಾಶಸ್ತ್ಯದ ಮತವನ್ನು ಮೊದಲ ಅಭ್ಯರ್ಥಿಗೆ ಮತ್ತೊಬ್ಬ ಅಭ್ಯರ್ಥಿಗೆ 2ನೇ ಪ್ರಾಶಸ್ತ್ಯದ ಮತ ನೀಡಬೇಕಾಗುತ್ತದೆ.
Advertisement