ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ವಿಶ್ವನಾಥ್ ಕೂಡಾ ಕಾರಣ: 'ಹಳ್ಳಿ ಹಕ್ಕಿ' ಬೆಂಬಲಕ್ಕೆ ನಿಂತ ನಾರಾಯಣಗೌಡ
ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಅವರಿಗೆ ಟಿಕೆಟ್ ಖಚಿತ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ವಿಶ್ವನಾಥ್ ಕೂಡಾ ಕಾರಣರಾಗಿದ್ದು, ಕೊಟ್ಟ ಮಾತಿನಂತೆ ಬಿಜೆಪಿ ಹೈಕಮಾಂಡ್ ನಡೆದುಕೊಳ್ಳುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ವಿಶ್ವನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ.
ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದು ನಿಜ. ಹೀಗಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ'' ಎಂದು ನಾರಾಯಣಗೌಡ ಹೇಳಿದರು.
ಆರ್.ಶಂಕರ್ ಅವರಿಗೆ ಪರಿಷತ್ ಚುನಾವಣೆ ಟಿಕೆಟ್ ನೀಡುವುದು ಗ್ಯಾರೆಂಟಿ ಎಂದು ಇತ್ತೀಚೆಗೆ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದರು, ಅದರ ಬೆನ್ನಲ್ಲೇ ನಾರಾಯಣಗೌಡ ಈ ಹೇಳಿಕೆ ನೀಡಿದ್ದಾರೆ. ಇನ್ನೂ ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣಗೌಡ ಈ ಕಾಯಿದೆಯಿಂದ ರೈತರಿಗೆ ಅನುಕೂಲವಾಲಿದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ