ಯಡಿಯೂರಪ್ಪ
ಯಡಿಯೂರಪ್ಪ

ಮುಗಿಯಿತು ಉಪಚುನಾವಣೆ, ಮುಗಿದಿಲ್ಲ ಸಂಪುಟ ವಿಸ್ತರಣೆ: ಎಲ್ಲರನ್ನೂ ಸಂಭಾಳಿಸುವುದು ಸಿಎಂಗೆ ಅಗ್ನಿ ಪರೀಕ್ಷೆ

ಉಪ ಚುನಾವಣೆ ಫಲಿತಾಂಶದೊಂದಿಗೆ ಬಿಜೆಪಿಗೆ ಮತ್ತಿಬ್ಬರು ಹೊಸ ಶಾಸಕರ ಸೇರ್ಪಡೆಯಾಗಿದೆ. ಈಗ ಸದ್ಯ ಸಿಎಂ ಯಡಿಯೂರಪ್ಪ ಮುಂದೆ ಸಂಪುಟ ವಿಸ್ತರಣೆ ಸವಾಲು ಎದುರಾಗಿದೆ.
Published on

ಬೆಂಗಳೂರು: ಉಪ ಚುನಾವಣೆ ಫಲಿತಾಂಶದೊಂದಿಗೆ ಬಿಜೆಪಿಗೆ ಮತ್ತಿಬ್ಬರು ಹೊಸ ಶಾಸಕರ ಸೇರ್ಪಡೆಯಾಗಿದೆ. ಈಗ ಸದ್ಯ ಸಿಎಂ ಯಡಿಯೂರಪ್ಪ ಮುಂದೆ ಸಂಪುಟ ವಿಸ್ತರಣೆ ಸವಾಲು ಎದುರಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಜೊತೆಗೆ ಅತೃಪ್ತರನ್ನು ಸಮಾಧಾನ ಪಡಿಸಲು ನಿಗಮ-ಮಂಡಳಿ ನೇಮಕಕ್ಕೂ ಮುಂದಾಗಿದ್ದಾರೆ.

ಸರ್ಕಾರ ರಚಿಸಲು ಕಾರಣವಾದ 14 ಬಂಡಾಯ ಶಾಸಕರಿಗೂ ಸಚಿವ ಸ್ಥಾನ ನೀಡುವ ಭರವಸೆಯನ್ನು ಸಿಎಂ ನೆರವೇರಿಸಬೇಕಾಗಿದೆ.  34 ರಲ್ಲಿ 7 ಸ್ಥಾನಗಳು ಖಾಲಿಯಿವೆ.

ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಬಿಜೆಪಿಯ ಹೆಚ್ಚಿನ ಶಾಸಕರಿದ್ದಾರೆ. ಇರುವ 27 ಸಚಿವರಲ್ಲಿ 11ಮಂದಿ ಬೇರೆ ಪಕ್ಷದಿಂದ ಬಂದು ಬಿಜೆಪಿ ಸೇರಿದವರಾಗಿದ್ದಾರೆ, ಇನ್ನುಳಿದ ನಾಲ್ಕರಲ್ಲಿ ಎಂಟಿಬಿ ನಾಗರಾಜ್, ಮುನಿರತ್ನ, ಆರ್ ಶಂಕರ್, ಮತ್ತು ಎಚ್. ವಿಶ್ವನಾಥ್ ಇದ್ದಾರೆ.

ಇವರನ್ನು ಹೊರತು ಪಡಿಸಿ, ಸಿಪಿ ಯೋಗೇಶ್ವರ್, ಸುನಿಲ್ ಕುಮಾರ್, ಎಸ್ ಎ ರಾಮದಾಸ್, ಅಪ್ಪಚ್ಚು ರಂಜನ್ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್. ಅಂಗಾರ ಸೇರಿದಂತೆ ಹಲವು ಶಾಸಕರು ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಎಲ್ಲರನ್ನು ಸಮಾಧಾನ ಪಡಿಸಿ, ಸಮತೋಲಿತ ಸಂಪುಟ ರಚಿಸುವುದು ಸಿಎಂ ಮುಂದಿರುವ ದೊಡ್ಡಸವಾಲಾಗಿದೆ.

ಬಸವಕಲ್ಯಾಣ, ಮಸ್ಕಿ ಉಪಚುನಾವಣೆಯದಲ್ಲೂ ಇದೇ ರೀತಿಯ ಫಲಿತಾಂಶವನ್ನು ಸಿಎಂ ಎದುರು ನೋಡುತ್ತಿದ್ದಾರೆ, ಆದರೆ ಅದಕ್ಕೂ ಮೊದಲು ಸಿಎಂ ಎಲ್ಲವನ್ನು ಸರಿ ಪಡಿಸಬೇಕಿದೆ. ಉಪ ಚುನಾವಣೆ ಫಲಿತಾಂಶ ಪ್ರಕಟವಾದ 24 ಗಂಟೆಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಸಚಿವರಾಗಲು ನಾನು ಈಗಾಗಲೇ ನನ್ನ ಅರ್ಜಿಯನ್ನು ಸಲ್ಲಿಸಿದ್ದೇನೆ, ಆದರೆ ಈಗ ಅದನ್ನು ನಿರ್ಧರಿಸಲು ಸಿಎಂಗೆ ಬಿಡಲಾಗಿದೆ. ಕೆಲವು ಮಂತ್ರಿಗಳನ್ನು ಕೈಬಿಡಲಾಗುವುದು ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸುರಪುರ ಶಾಸಕ ರಾಜು ಗೌಡ ನಾಯಕ್ ಹೇಳಿದ್ದಾರೆ.

ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಶಿವರಾಜ್ ಪಾಟೀಲ್ ಮತ್ತು ಬೆಳ್ಳಿ ಪ್ರಕಾಶ್ ಅವರೊಂದಿಗೆ ಸಿಎಂ ನಿವಾಸದಿಂದ ನೇರವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿದರು. ಮೂರುದಿನಗಳ ದೆಹಲಿ ಪ್ರವಾಸದಿಂದ ವಾಪಾಸಾಗಿರುವ ಜಾರಕಿಹೊಳಿ ಶಾಸಕರಿಗೆ ಔತಣ ಕೂಟ ಏರ್ಪಡಿಸಿದ್ದರು.

ಸಿಎಂ ಯಡಿಯೂರಪ್ಪ ಸಂಪುಟ ಪುನಾರಚನೆ ಬಯಸಿದ್ದು, ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದಾರೆ, ಆದರೆ ಕೇವಲ ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸಲು  ಸಿಎಂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಲು ನಿರ್ಧರಿಸಿದ್ದಾರೆ.  ಆದರೆ ಶಾಸಕರನ್ನು ನಿಗಮ-ಮಂಡಳಿಗಳಿಗೆ ನೇಮಿಸುವುದರಿಂದ ಪಕ್ಷದ ಕಾರ್ಯಕರ್ತರಿಗೆ
ಬೇಸರವಾಗುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಲಹೆ ಮೇರೆಗೆ ಯಡಿಯೂರಪ್ಪ ಅವರು ಮಂಡಳಿಗಳು, ಅಧಿಕಾರಿಗಳು ಮತ್ತು ನಿಗಮಗಳಿಗೆ ಕಾರ್ಯಕರ್ತರನ್ನು ನೇಮಿಸುವ ಸಾಧ್ಯತೆಯಿದೆ. ಹೊಸ ಮುಖಗಳನ್ನು ಸೇರಿಸಿದ ನಂತರವೂ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಒಂದು ಸಚಿವ ಸ್ಥಾನ ಖಾಲಿ ಇರಿಸಲು ಸಿಎಂ ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com