ಯಡಿಯೂರಪ್ಪ, ದೇವೇಗೌಡ ಎಳಸು ಎತ್ತುಗಳೇ?, ಮೋದಿ 2 ಹಲ್ಲು ಎತ್ತೇ?: ಸಿದ್ದರಾಮಯ್ಯ

ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರನ್ನು ಮುದಿ ಎತ್ತು ಎಂದಿರುವ ಬಿಜೆಪಿ ನಾಯಕ ಬಿ.ಜೆ ಪುಟ್ಟಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯ ಯಡಿಯೂರಪ್ಪ, ಜೆಡಿಎಸ್‌ನ ದೇವೇಗೌಡರು ಏನು ಎಳಸು ಎತ್ತುಗಳೇ? ಪ್ರಧಾನಿ ನರೇಂದ್ರ ಮೋದಿ ಎರಡು ಹಲ್ಲು ಎತ್ತೇ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರನ್ನು ಮುದಿ ಎತ್ತು ಎಂದಿರುವ ಬಿಜೆಪಿ ನಾಯಕ ಬಿ.ಜೆ ಪುಟ್ಟಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯ ಯಡಿಯೂರಪ್ಪ, ಜೆಡಿಎಸ್‌ನ ದೇವೇಗೌಡರು ಏನು ಎಳಸು ಎತ್ತುಗಳೇ? ಪ್ರಧಾನಿ ನರೇಂದ್ರ ಮೋದಿ ಎರಡು ಹಲ್ಲು ಎತ್ತೇ? ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾದಲ್ಲಿ ಬಿಜೆಪಿ ನಾಯಕರು ಚುನಾವಣೆಗೆ ಹಣ ಚೆಲ್ಲುತ್ತಿದ್ದಾರಾದರೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್. ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಸೋಲಿನ ಭಯದಿಂದ ಕ್ಷೇತ್ರದಲ್ಲಿ ಗಲಾಟೆ ಮಾಡಿಸುತ್ತಿದ್ದಾನೆ‌. ಪಿಎಸ್ಐ ಮುನಿರತ್ನ ಪರ ಇದ್ದು ಮುನಿರತ್ನ ಗಲಾಟೆಗಳಿಗೆ ಸಾಥ್ ನೀಡುತ್ತಿದ್ದಾನೆ ಎಂದು ಹರಿಹಾಯ್ದರು.

ಗಲಾಟೆಗೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಜಿ.ಕೆ ವೆಂಕಟೇಶ್ ಅವರನ್ನು ಪೊಲೀಸರು ಬಂಧಿಸಬೇಕು. ಅಲ್ಲಿಯ ಪೊಲೀಸರು ನಿಶಕ್ತರಾಗಿದ್ದಾರೆ. ಆರ್.ಆರ್ ನಗರ ಇನ್ಸ್ ಪೆಕ್ಟರ್ ಮುನಿರತ್ನ ಪರ ಇದ್ದಾನೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿರೊದು ಮುನಿರತ್ನ ಅವರಿಂದ ಬೇರೆಯವರಿಂದಲ್ಲ. ದೂರು ಕೊಟ್ಟರೂ ಪಿ‌ಎಸ್‌ಐ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಪ್ರತಿಭಟನೆ ಬಳಿಕ ಎಫ್ಐಆರ್ ಮಾಡಿದ್ದಾರೆ. ಮುನಿರತ್ನ ಮೊದಲಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ನಾಡಿದ್ದು ಮತ್ತೆ ರಾಜರಾಜೇಶ್ವರಿ ನಗರದಲ್ಲಿ ಪ್ರಚಾರ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಭಿಮಾನದಿಂದ ಹೇಳುತ್ತಾರೆ. ಆದರೆ ನಮ್ಮ ಪಕ್ಷದಲ್ಲಿ ಒಂದು ಸಂಪ್ರದಾಯವಿದೆ. ಪಕ್ಷ ಅಧಿಕಾರಕ್ಕೆ ಬರುವಷ್ಟು ಶಾಸಕರು ಗೆದ್ದ ಬಳಿಕ ಸಿಎಂ ಅಭ್ಯರ್ಥಿ ಯಾರು ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com