ಬೆಂಗಳೂರು: ಸಚಿವರುಗಳಿಗೆ ಪ್ರತಿದಿನ ಜಿಲ್ಲೆಗಳಿಗೆ ಭೇಟಿ ನೀಡಿ, ಬಿಜೆಪಿ ಕಾರ್ಯಾಲಯಕ್ಕೆ ತೆರಳಿ ಕಾರ್ಯಕರ್ತರ ಅಹವಾಲು ಸ್ವೀಕಾರ ಮಾಡುವುದು ಸೇರಿದಂತೆ ಸಂಘ ಪರಿವಾರದವರ ಮನೆಗೆ ಭೇಟಿ ಮಾಡಲು ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷರು ಸೂಚಿಸಿರುವುದಾಗಿ ಅಬಕಾರಿ ಸಚಿವ ಗೋಪಾಲಯ್ಯ ಅವರು ಸೋಮವಾರ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಯ್ಯ, ಪ್ರತಿ ಗುರುವಾರ ವಿಧಾನಸೌಧದಲ್ಲಿ ಇದ್ದು ಅಹವಾಲು ಸ್ವೀಕಾರಕ್ಕೆ ಹಿಂದಿನಿಂದಲೂ ಯಡಿಯೂರಪ್ಪ ಅವರ ಕಾಲದಿಂದಲೂ ಮಾಡುತ್ತಿದ್ದೇವೆ ಎಂದರು.
ಜಗನ್ನಾಥ ಭವನದಲ್ಲಿ ಕೂಡ ಕಾರ್ಯಕರ್ತರ ಸಮಸ್ಯೆ ಆಲಿಸಿ ಸ್ಪಂದಿಸುವುದು. ಸಾರ್ವಜನಿಕರ ಮತ್ತು ಕಾರ್ಯಕರ್ತರ ಸಮಸ್ಯೆ ಆಲಿಸುವ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಬೆಳಗ್ಗೆ 11 ರಿಂದ 1 ಗಂಟೆವರೆಗೂ ಸಮಸ್ಯೆ ಆಲಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದರು.
ಇಲಾಖೆಯಿಂದ ಸಚಿವರಿಗೆ ಹಫ್ತ ಕೊಡುವ ಆಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿದ ಗೋಪಾಲಯ್ಯ, ಆ ಬಗ್ಗೆ ತನಿಖೆ ನಡೆಸುವಂತೆ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಿದ್ದು, ಶೀಘ್ರವೇ ವರದಿ ಬರಲಿದೆ ಎಂದರು.
ಅಬಕಾರಿ ಇಲಾಖೆಯನ್ನು ತಮಗೆ ನೀಡಿದ್ದು ಅದರಲ್ಲಿ ಸಾಧನೆ ಮಾಡಿ, ಇಲಾಖೆಯನ್ನು ಲಾಭದಾಯಕ ಹಾದಿಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿಗೆ ಬಂದಿರುವ ಯಾವುದೇ ಶಾಸಕರಿಗೆ ಅನ್ಯಾಯವಾಗುವುದಿಲ್ಲ ಎಂಬ ವಿಶ್ವಾಸವನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ವ್ಯಕ್ತಪಡಿಸಿದ್ದಾರೆ.
Advertisement