ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕಳೆದುಕೊಂಡ ನಂತರ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಇದೀಗ ತುಂಬದೆ ಖಾಲಿಯಾಗಿರುವ 5 ಸಚಿವ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಜಾತಿ ಲೆಕ್ಕಾಚಾರದ ಮೂಲಕ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಮಂತ್ರಿಸ್ಥಾನ ಸಿಗದಿದ್ದರ ಬಗ್ಗೆ ನಿನ್ನೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಶ್ರೀಮಂತ ಪಾಟೀಲ್ ಹೊರಹಾಕಿದ್ದಾರೆ. ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ತೃಪ್ತನಾಗುವವನು ನಾನಲ್ಲ ಎಂದಿರುವ ಶ್ರೀಮಂತ ಪಾಟೀಲ್ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದು ತಮ್ಮ ಸಮುದಾಯದ ನಾಯಕರ ಬೆಂಬಲದಿಂದ ಮಂತ್ರಿ ಸ್ಥಾನಕ್ಕೆ ತೀವ್ರ ಲಾಬಿ ಮಾಡುತ್ತಿದ್ದಾರೆ.
ಇತ್ತೀಚೆಗೆ, ಕೆಲವು ಮರಾಠ ನಾಯಕರು ಸಿಎಂ ಬೊಮ್ಮಾಯಿ ಅವರನ್ನು ಪಾಟೀಲ್ ಗೆ ಮರಾಠ ಕೋಟಾದಡಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದರು. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ಪಡೆಯುವ ವಿಶ್ವಾಸವಿದೆ. ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಪೂರೈಸುವ ಕೆಲಸ ಮಾಡುತ್ತೇನೆ. ನನಗೆ ದೊಡ್ಡ ಜವಾಬ್ದಾರಿಯನ್ನು ನೀಡಲು ಹೈಕಮಾಂಡ್ ಒಲವು ತೋರಿಸಬೇಕು ಎಂದು ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಹಿಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದಿಂದ ಹೊರಬಂದು ಬಿಜೆಪಿ ಸೇರಿ ಸರ್ಕಾರ ರಚನೆಯಲ್ಲಿ ಶ್ರೀಮಂತ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದರು.
Advertisement