ಆನೇಕಲ್ ನಾರಾಯಣಸ್ವಾಮಿ ಅವರಿಂದ ಗೋಪೂಜೆ
ಆನೇಕಲ್ ನಾರಾಯಣಸ್ವಾಮಿ ಅವರಿಂದ ಗೋಪೂಜೆ

ರಾಜ್ಯದ ಸರಣಿ ಚುನಾವಣೆಗಳಿಗೆ ಬಿಜೆಪಿ ತಂತ್ರ: 'ಜನಾಶೀರ್ವಾದ ಯಾತ್ರೆ'ಯಿಂದ ಹೊಸ ಬ್ರಾಂಡ್ ಅಂಬಾಸಿಡರ್ ಗಳ ಸೃಷ್ಟಿ!

ಬಿಜೆಪಿ ಜನಾಶೀರ್ವಾದ ಯಾತ್ರೆಯನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ, ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮೂಲಕ ಮುಂದಿನ ಪೀಳಿಗೆಯ ನಾಯಕರನ್ನು ಸಿದ್ದಪಡಿಸುತ್ತಿದೆ.
Published on

ತುಮಕೂರು: ಬಿಜೆಪಿ ಜನಾಶೀರ್ವಾದ ಯಾತ್ರೆಯನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ, ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮೂಲಕ ಮುಂದಿನ ಪೀಳಿಗೆಯ ನಾಯಕರನ್ನು ಸಿದ್ದಪಡಿಸುತ್ತಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ವಿವಿಧ ವಿಭಾಗಗಳೊಂದಿಗೆ ಒಡನಾಟ ಹೊಂದಲು ಯತ್ನಿಸುತ್ತಿದೆ. ನೂತನ ಕೇಂದ್ರ ಸಚಿವರು ಹೋದ ಪ್ರದೇಶಗಳಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಆನೇಕಲ್ ನಾರಾಯಣಸ್ವಾಮಿ ಅವರನ್ನು ನೆಲಮಂಗಲ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ತುಮಕೂರಿನಲ್ಲಿ ಮಂಗಳವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಎಸ್ ಸಿ ಎಡ ಸಮುದಾಯದ ಸದಸ್ಯರು ರಾಜಕೀಯ ಪಕ್ಷಗಳ ಗಡಿ ತೊರೆದು  ಜೈ ಮಾದಿಗ ಎಂಬ ಘೋಷಣೆಯೊಂದಿಗೆ ತಮ್ಮ ಸಮುದಾಯದ ನಾಯಕನನ್ನು ಸ್ವಾಗತಿಸಿದರು. ಶೇ. 15 ರಷ್ಟು ಎಸ್‌ಸಿ ಕೋಟಾದೊಳಗಿನ ಆಂತರಿಕ ಮೀಸಲಾತಿಯ ಬೇಡಿಕೆಯಲ್ಲಿ ಅವರು ಅಚಲವಾಗಿರುವುದು ಅವರಿಗೆ ಕೆಲಸ ಮಾಡಿರಬಹುದು.

ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದರೆ, ಎಸ್‌ಸಿ-ಎಡ ಸಮುದಾಯವು ಪ್ರತ್ಯೇಕವಾಗಿ ಶೇ 6 ರಷ್ಟು ಆಂತರಿಕ ಮೀಸಲಾತಿಯನ್ನು ಪಡೆಯುತ್ತದೆ.

ಆಂತರಿಕ ಮೀಸಲಾತಿಯಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಹಲವಾರು ವರ್ಷಗಳಿಂದ ಇದಕ್ಕಾಗಿ ಹೋರಾಡಿದ್ದೇನೆ. ಆದರೆ ಎಲ್ಲಾ ಎಸ್‌ಸಿ ಸಮುದಾಯಗಳ ಹೃದಯವನ್ನು ಗೆಲ್ಲುವ ಮೂಲಕ ಇದನ್ನು ಸಾಧಿಸಲಾಗುವುದು ಎಂದು ಅವರು ಸಿದ್ದಗಂಗಾ ಮಠದಲ್ಲಿ ಘೋಷಿಸಿದರು. ನನಗೆ ಈ ಖಾತೆ ಘೋಷಿಸಿದಾಗ ಆಶ್ಚರ್ಯವಾಯಿತು. ನನ್ನ ಮೂರು ದಶಕಗಳ ಬದ್ಧತೆ ಹಾಗೂ ಪಕ್ಷ ಸಿದ್ಧಾಂತ ನನಗೆ ಈ ಸ್ಥಾನ ನೀಡಿದೆ ಎಂದರು.

ಆನೇಕಲ್ ವಿಧಾನಸಭಾ ಸ್ಥಾನವನ್ನು ಕಳೆದುಕೊಂಡ ನಂತರ ನಾರಾಯಣಸ್ವಾಮಿ ಚಿತ್ರದುರ್ಗ ಲೋಕಸಭಾ ಸ್ಥಾನಕ್ಕೆ ವಲಸೆ ಹೋದರು. ಅವರು ಹಳೆಯ ಮೈಸೂರು, ವಿಶೇಷವಾಗಿ ತುಮಕೂರು ಮತ್ತು ಚಿತ್ರದುರ್ಗದ ಭಾಗಗಳಲ್ಲಿ ಎಸ್ಸಿ-ಎಡ ಸಮುದಾಯ (ಮಾದಿಗ) ದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಮಾಜಿ ಸಚಿವ ಸದಾನಂದಗೌಡ ಅವರ ಸ್ಥಾನಕ್ಕೆ ಬದಲಿಯಾಗಿ ಶೋಭಾ ಕರಂದ್ಲಾಜೆ ಅವರನ್ನು ತರಲಾಗಿದೆ, ಒಕ್ಕಲಿಗ ಸಮುದಾಯವೇ ಅಧಿಕ ಸಂಖ್ಯೆಯಲ್ಲಿರುವ  ಮಂಡ್ಯ, ಹಾಸನದಲ್ಲಿ  ತೊಡಗಿಸಿಕೊಂಡಿದ್ದಾರೆ.

ಲಿಂಗಾಯತ ಮುಖಂಡ ಭಗವಂತ್ ಖೂಬಾ ಬೀದರ್ ನಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡರು. ಈ ಪ್ರದೇಶದಲ್ಲಿ ಸಮುದಾಯದ ಸಂಖ್ಯೆ ಅಧಿಕವಾಗಿದೆ. ಇದರ ಜೊತೆಗೆ ಮತ್ತೊಬ್ಬ ಸಚಿವರಾದ ರಾಜೀವ್ ಚಂದ್ರಶೇಖರ್ ಹುಬ್ಬಳ್ಳಿ,ಉತ್ತರ ಕನ್ನಡದಲ್ಲಿ ಯಾತ್ರೆ ಕೈಗೊಂಡರು, ಈ ಪ್ರದೇಶದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ವಯಕ್ತಿಕ ಕಾರಣಗಳಿಂದಾಗಿ ಸಕ್ರಿಯವಾಗಿಲ್ಲ.  ಮುಂಬರುವ ಸರಣಿ ಚುನಾವಣೆಯ ಹಿನ್ನೆಲೆಯಲ್ಲಿ ಈ ಎಲ್ಲಾ ತಂತ್ರ ಬಿಜೆಪಿಗೆ ಲಾಭವಾಗಿ ಪರಿಣಮಿಸಲಿದೆಯೇ ಕಾದು ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com