'ಬೇಟಿ ಬಚಾವೋ' ಮೋದಿ ಫೋಟೋ ಇರುವ ಜಾಹಿರಾತಿಗೆ ಮಾತ್ರ: ಬಿಜೆಪಿಯದ್ದು ತಾಲಿಬಾನ್ ಮನಸ್ಥಿತಿ!
ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರುಗಳ ಅಜಾಗರೂಕತೆ ಹೇಳಿಕೆಗಳಿಗೆ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಅತ್ಯಾಚಾರದ ಘಟನೆಗಳು ನಡೆದಿವೆ ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದರು. ಇದಕ್ಕೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, 'ನಡೆದಿದೆ ಸ್ವಾಮಿ, ಆದರೆ ಆಗ ಯಾರೂ ಹೊಣೆಗೇಡಿತನ ಪ್ರದರ್ಶಿಸಲಿಲ್ಲ, ಅಸಂಬದ್ಧ ಮಾತುಗಳನ್ನಾಡಲಿಲ್ಲ. ಅತ್ಯಾಚಾರದಂತ ಗಂಭೀರ ಕೃತ್ಯವನ್ನು ಸಾಮಾನ್ಯೀಕರಿಸುವ ಪ್ರಯತ್ನ ಮಾತಾಡುತ್ತಿರುವ ಬಿಜೆಪಿ ತಾಲಿಬಾನ್ ಮನಸ್ಥಿತಿ ಹೊಂದಿದೆ' ಎಂದು ಆರೋಪಿಸಿದೆ.
ಬಿಜೆಪಿ ಪಾಲಿಗೆ "ಬೇಟಿ ಬಚಾವೋ" ಎಂಬ ಘೋಷಣೆ ಮೋದಿ ಫೋಟೋ ಇರುವ ಜಾಹಿರಾತಿಗೆ ಮಾತ್ರ! ಎಂದು ಕಿಡಿಕಾರಿದೆ. ಸಚಿವರ ಹೇಳಿಕೆಗಳ ಅಸಲಿ ಅರ್ಥ ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಬಚಾವು ಮಾಡಿಕೊಳ್ಳಿ ಬಿಜೆಪಿ ಸರ್ಕಾರದಿಂದ ಅಸಾಧ್ಯ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.
ಹೊಣೆಗೇಡಿ ಗೃಹ ಸಚಿವರಾಗಿ ವೈಫಲ್ಯ ಪ್ರಶ್ನಿಸಿದ ಮಾತ್ರಕ್ಕೆ ಕಾಂಗ್ರೆಸ್ಗೆ ರಾಜಕೀಯ ಮಾಡುತ್ತಿದೆ ಎನ್ನುವ ಇದೇ ಗೃಹ ಸಚಿವರು ಹಿಂದೆ ತಾವು ಮಾಡಿದ್ದೇನು, ಇವರದ್ದೇ ಕ್ಷೇತ್ರದಲ್ಲಿ ನಡೆದ ನಂದಿತಾ ಪ್ರಕರಣವನ್ನು ಹೇಗೆಲ್ಲಾ ರಾಜಕೀಯ ಲಾಭಕ್ಕೆ ಬಳಸಿದರು, ನೆನಪಿಸಿಕೊಳ್ಳಲಿ. ಅತ್ಯಾಚಾರದಲ್ಲಿ ರಾಜಕೀಯ ಮಾಡಿದವರು ನೀವಲ್ಲವೇ? ಎಂದು ಪ್ರಶ್ನಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ