ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಾಂಗ್ರೆಸ್ ಸರ್ಕಾರವಿದ್ದಾಗ ಎಲ್ಲಿಯೇ ಕೊಲೆ, ಸುಲಿಗೆ, ಅತ್ಯಾಚಾರ ನಡೆಯಲಿ ಅಲ್ಲಿಗೆ ರಣಹದ್ದುಗಳಂತೆ ಹಾರಿಬಂದು ಸರ್ಕಾರವೇ ಕಾರಣವೆಂದು ಎಗರಿ ಬೀಳುತ್ತಿದ್ದಿರಲ್ಲ ಶೋಭಾ ಕರಂದ್ಲಾಜೆ ಅವರೇ, ಉತ್ತರದಾಯಿತ್ವದ ಸ್ಥಾನ ಸಿಕ್ಕಮೇಲೆ ಬಾಯಿ ಮುಚ್ಚಿಕೊಳ್ಳುವ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!’ ಎಂದು ಟ್ವೀಟ್ ಮಾಡಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೋಭಾ, ಈಗ ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇನೆ. ಈ ಕಾರಣದಿಂದ ಹೋರಾಟಗಾರ್ತಿಯಂತೆ ಮಾತನಾಡಲು ಆಗದು ಎಂದು ಹೇಳಿದ್ದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದ ಗುಡ್ಡದಲ್ಲಿ ಮಂಗಳವಾರ ರಾತ್ರಿ ಸುಮಾರು 7.30ರ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು.
Advertisement
Advertisement