ಮೈಸೂರು: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸದಿದ್ದರೆ ರಾಜ್ಯದಲ್ಲಿ ಪಕ್ಷಕ್ಕೆ ಉಳಿಗಾಲವಿರಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಆಡಳಿತದ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿವೆ. ಹೈಕಮಾಂಡ್ ಎಲ್ಲವನ್ನೂ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಬದಲಾವಣೆ ನಿಶ್ಚಿತ’ ಎಂದರು. ಆಗಸ್ಟ್ 15 ರೊಳಗೆ ಸಿಎಂ ಬದಲಾವಣೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರು, ಭ್ರಷ್ಟರನ್ನು ಸಂಹರಿಸು ತಾಯಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿಕೊಂಡಿರುವೆ’ ಎಂದು ತಿಳಿಸಿದರು. ‘ಲೂಟಿ ನಡೆಯುತ್ತಿದ್ದರೂ ವಿರೋಧ ಪಕ್ಷದವರು ತುಟಿ ಬಿಚ್ಚುತ್ತಿಲ್ಲ. ತಮ್ಮ ಪಾವಿತ್ರ್ಯವನ್ನೇ ಕಳೆದುಕೊಂಡಿದ್ದಾರೆ.
ಲಿಂಗಾಯತ ಸಮುದಾಯದಲ್ಲಿ ಅವರಿಗಿಂತ ದೊಡ್ಡ ನಾಯಕರಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾವಣೆ ಇಲ್ಲ ಅಂತ ರಾಷ್ಟ್ರೀಯ ಅಧ್ಯಕ್ಷರು ಹೇಳಲಿ ಅಂದೇ ಈ ವಿಚಾರ ಬಿಡ್ತೇನೆ ಎಂದಿದ್ದಾರೆ. ಇನ್ನು ನಾಯಕತ್ವ ಬದಲಾವಣೆ ವಿಚಾರ ಹೆಚ್ಚು ಚರ್ಚೆಯಾದಾಗ ಸಿಎಂ ಯಡಿಯೂರಪ್ಪ ಪರ ಮಠಾಧೀಶರು ನಿಂತಿದ್ದಾರೆ.
ಹೊಸಮಠಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ಚಿದಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಯಡಿಯೂರಪ್ಪ ಬೆನ್ನಿಗೆ ನಿಂತಿರುವ ಸ್ವಾಮೀಜಿಗಳ ಮೇಲೆ ಯತ್ನಾಳ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು..
ದಕ್ಷಿಣೆ ಆಸೆಗಾಗಿ ಹೀಗೆ ಸಿಎಂ ಪರ ಮಾತನಾಡುತ್ತಿದ್ದಾರೆ. ಮಠಾಧೀಶರೆಂದರೆ ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಸಿಎಂ ಬದಲಾದ್ರೆ ಬೀದಿಗೆ ಬಂದು ಹೋರಾಟ ಮಾಡ್ತೇವೆ ಅಂತಾರೆ ಎಂದು ಗುಡುಗಿದ್ದಾರೆ.
ಬಹುತೇಕ ರಾಜಕೀಯ ನಾಯಕರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಾರೆ. ಆದರೆ ಯತ್ನಾಳ್ ಸುತ್ತೂರು ಮಠಕ್ಕೆ ಭೇಟಿ ನೀಡದೇ ಆಶ್ಚರ್ಯ ಮೂಡಿಸಿದ್ದಾರೆ. ಇತ್ತೀಚೆಗಷ್ಟೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸಚಿವ ಯೋಗೇಶ್ವರ್ ಸುತ್ತೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು. ಮೈಸೂರಿನ ಭೇಟಿ ವೇಳೆ ಚಾಮುಂಡೇಶ್ವರಿ ದೇವಾಸ್ಥಾನ ಮತ್ತು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮೀಜಿ ದರ್ಶನ ಪಡೆದ ಯತ್ನಾಳ್ ಖಾಸಗಿ ಹೋಟೆಲ್ ನಲ್ಲಿ ಎಂಎಲ್ ಸಿ ವಿಶ್ವನಾಥ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
Advertisement