ತೇಜಸ್ವಿನಿ ಅನಂತ್ ಕುಮಾರ್ ಪಕ್ಷಕ್ಕೆ ಬಂದರೆ ಸ್ವಾಗತ: ವಿಜೇತ ನನಗೆ ಸೋದರಿ ಸಮಾನರು: ಟ್ವೀಟ್ ಗೆ ಹೆಚ್ ಡಿಕೆ ಫುಲ್ ಖುಷ್!

ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಪಕ್ಷವಾಗಿಯೇ ಇದೆ ಎಂದು ಬಿಜೆಪಿ ನಾಯಕ ಕೇಂದ್ರ ಸರ್ಕಾರದ ದಿವಂಗತ ಸಚಿವ ಅನಂತ್ ಕುಮಾರ್ ಪುತ್ರಿ ವಿಜೇತಾ ಅನಂತ್ ಕುಮಾರ್ ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ.
ಹೆಚ್ ಡಿ ಕುಮಾರಸ್ವಾಮಿ, ವಿಜೇತ ಅನಂತ್ ಕುಮಾರ್(ಸಂಗ್ರಹ ಚಿತ್ರ)
ಹೆಚ್ ಡಿ ಕುಮಾರಸ್ವಾಮಿ, ವಿಜೇತ ಅನಂತ್ ಕುಮಾರ್(ಸಂಗ್ರಹ ಚಿತ್ರ)

ಬೆಂಗಳೂರು: ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಪಕ್ಷವಾಗಿಯೇ ಇದೆ ಎಂದು ಬಿಜೆಪಿ ನಾಯಕ ಕೇಂದ್ರ ಸರ್ಕಾರದ ದಿವಂಗತ ಸಚಿವ ಅನಂತ್ ಕುಮಾರ್ ಪುತ್ರಿ ವಿಜೇತಾ ಅನಂತ್ ಕುಮಾರ್ ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ.

ಈ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಅನಂತ್ ಕುಮಾರ್ ಪುತ್ರಿಯವರ ಹೇಳಿಕೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅನಂತ್ ಕುಮಾರ್ ಪತ್ನಿ ಮತ್ತು ಪುತ್ರಿ ನನಗೆ ಸಹೋದರಿ ಸಮಾನರು, ಅವರ ಹೇಳಿಕೆಗೆ ಧನ್ಯವಾದಗಳು, ಜೆಡಿಎಸ್ ಪಕ್ಷ ಅಸ್ತಿತ್ವವೇ ಇಲ್ಲ ಎಂದು ಹೇಳುವವರಿಗೆ ಅವರ ಹೇಳಿಕೆ ತಕ್ಕ ಉತ್ತರವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ.

ವಿಜೇತ ಅನಂತ್ ಕುಮಾರ್ ಅವರ ಹೇಳಿಕೆ ನಮ್ಮ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚು ಮಾಡಿದೆ. ರಾಜಕಾರಣದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯಬೇಕಷ್ಟೆ. ಇಂದು ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ವಿದ್ಯಾಮಾನಗಳ ನಡುವೆ ವಿಜೇತ ಅನಂತ್ ಕುಮಾರ್ ಅವರು ಮಾಡಿರುವ ಟ್ವೀಟ್ ಬಹಳ ಮುಖ್ಯವಾಗುತ್ತದೆ. ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಇನ್ನೂ ಶಕ್ತಿಯುತವಾಗಿದೆ ಎಂದು ಅವರು ನೀಡಿರುವ ಅಭಿಪ್ರಾಯಕ್ಕೆ ನಮ್ಮ ಲಕ್ಷಾಂತರ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತೇಜಸ್ವಿನಿ ಅನಂತ್ ಕುಮಾರ್ ನಮ್ಮ ಪಕ್ಷಕ್ಕೆ ಬರುವುದಾದರೆ ಪೂರ್ಣ ಮನಸ್ಸಿನಿಂದ ಸ್ವಾಗತಿಸುತ್ತೇವೆ, ಬಿಜೆಪಿಯಲ್ಲಿ ಅವರನ್ನು ಗುರುತಿಸಿದ್ದಾರೋ ಇಲ್ಲವೋ ಗೊತ್ತಿಲ್ಲ, ಜೆಡಿಎಸ್ ಗೆ ಬರುವುದಾದರೆ ತೇಜಸ್ವಿನಿ ಮತ್ತು ಅವರ ಪುತ್ರಿ ವಿಜೇತ ಅವರಿಗೆ ಉತ್ತಮವಾದ ಗೌರವ ನೀಡಿ ಎಲ್ಲ ರೀತಿಯಲ್ಲಿಯೂ ಬೆಂಬಲಿಸುತ್ತೇವೆ ಎಂದರು.

ಅನಂತ್ ಕುಮಾರ್ ಅವರು ಇದ್ದಾಗ ರಾಜ್ಯದ ಹಿತಾಸಕ್ತಿ ಪರವಾಗಿಯೇ ಇದ್ದರು. ಆದರೆ ಇಂದು ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರಿದ್ದರೂ ಕೇಂದ್ರದಲ್ಲಿ ರಾಜ್ಯದ ಪರವಾಗಿ ಧ್ವನಿಯೆತ್ತುತ್ತಿಲ್ಲ, ಹೋರಾಡುತ್ತಿಲ್ಲ ಎಂದರು.

ಅನಂತ್ ಕುಮಾರ್ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ರಾಜ್ಯದ ಏಕೈಕ ಜೆಡಿಎಸ್ ಲೋಕಸಭಾ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇನ್ನು ಜೆಡಿಎಸ್ ಮತ್ತು ಬಿಜೆಪಿ ನಾಯಕರಲ್ಲಿ ಕೂಡ ವಿಜೇತ ಅವರ ಈ ಟ್ವೀಟ್ ಭಾರೀ ಕುತೂಹಲ, ಚರ್ಚೆಯನ್ನು ಹುಟ್ಟುಹಾಕಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯಿಂದ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿ ಅವರು ಗೆದ್ದು ಬಂದರು. ನಂತರ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಎಂದು ನೇಮಕ ಮಾಡಲಾಯಿತಾದರೂ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿಲ್ಲ. ಬದಲಾಗಿ ತಮ್ಮ ಸಾಮಾಜಿಕ ಮತ್ತು ಪರಿಸರ ಪೂರಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com