ಕೇಂದ್ರದ ರಾಜಕೀಯ ಭವಿಷ್ಯ ಬಿಜೆಪಿ, ಕಾಂಗ್ರೆಸ್ ಕೈಯಲ್ಲಿದೆ: ಹೆಚ್ ಡಿ ದೇವೇಗೌಡ 

ಕರ್ನಾಟಕದ 'ಮಣ್ಣಿನ ಮಗ' ಎಂದು ಹೆಸರು ಪಡೆದ ಹೆಚ್ ಡಿ ದೇವೇಗೌಡರು ದೇಶದ ಅತ್ಯುನ್ನತ ಹುದ್ದೆ ಪ್ರಧಾನ ಮಂತ್ರಿಯಾಗಿ 25 ವರ್ಷ ಕಳೆದಿದೆ.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು: ಕರ್ನಾಟಕದ 'ಮಣ್ಣಿನ ಮಗ' ಎಂದು ಹೆಸರು ಪಡೆದ ಹೆಚ್ ಡಿ ದೇವೇಗೌಡರು ದೇಶದ ಅತ್ಯುನ್ನತ ಹುದ್ದೆ ಪ್ರಧಾನ ಮಂತ್ರಿಯಾಗಿ 25 ವರ್ಷ ಕಳೆದಿದೆ.

ಶಾಸಕ ಹುದ್ದೆಯಿಂದ ಸಂಸದನಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಜೆಡಿಎಸ್ ವರಿಷ್ಠರು ಮೈತ್ರಿ ಸರ್ಕಾರವನ್ನು ಮುನ್ನಡೆಸಿದ ಅಪಾರ ಅನುಭವವನ್ನು ರಾಜಕೀಯದಲ್ಲಿ ಹೊಂದಿದವರು. ಜಾತ್ಯತೀತ ಜನತಾದಳವನ್ನು ಕರ್ನಾಟಕದಲ್ಲಿ ಬಲಪಡಿಸುವುದು ಅವರ ಮುಖ್ಯ ಉದ್ದೇಶವಾದರೂ ಕೂಡ ಕೇಂದ್ರದಲ್ಲಿ ರಾಜಕೀಯ ಬೆಳವಣಿಗೆ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಅವಲಂಬಿಸಿದೆ ಎನ್ನುತ್ತಾರೆ. ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ: 

25 ವರ್ಷಗಳಲ್ಲಿ ರಾಜಕೀಯ ಹೇಗೆ ಬದಲಾಗಿದೆ?
-ಹಿಂದೆ ಎನ್ ಡಿಎ ಮೈತ್ರಿಕೂಟದಲ್ಲಿದ್ದ ಹಲವು ಪಕ್ಷಗಳು ಇಂದು ಪಕ್ಷ ತೊರೆದಿವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಬಹುಮತ ಪಡೆದಿದ್ದರೂ ಕೂಡ ಶಿವಸೇನೆ ಮೊದಲಾದ ಪಕ್ಷಗಳು ಇಂದು ಎನ್ ಡಿಎಯಲ್ಲಿ ಇಲ್ಲ. ಇನ್ನು ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಕೂಡ ದುರ್ಬಲವಾಗಿದೆ.

ಯುಪಿಎ ಮೈತ್ರಿಕೂಟದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 27 ಪಕ್ಷಗಳಿದ್ದವು. ಈಗ ಹಲವು ಪಕ್ಷಗಳು ಅದನ್ನು ಕೂಡ ತೊರೆದಿವೆ. ಕಾಂಗ್ರೆಸ್ ಅವರನ್ನೆಲ್ಲರನ್ನೂ ಮತ್ತೆ ಒಟ್ಟು ಸೇರಿಸಬೇಕಾದರೆ ಸಾಕಷ್ಟು ಶ್ರಮ ಹಾಕಬೇಕು. ಅಂತಹ ಸಂದರ್ಭ ಮತ್ತೆ ಬರುತ್ತದೆ ಎಂದು ನನಗೆ ಅನಿಸುವುದಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಇಂದು ನಾನು ಇಲ್ಲ, ಕರ್ನಾಟಕಕ್ಕೆ ಸೀಮಿತವಾಗಿದ್ದೇನೆ.

ಕೇಂದ್ರದಲ್ಲಿ ಮೈತ್ರಿಕೂಟದ ಮುಖ್ಯಸ್ಥನಾಗಿ ಪ್ರಧಾನಿ ಹುದ್ದೆ ಅಲಂಕರಿಸಿ ನೀವು 25 ವರ್ಷಗಳು ಕಳೆದಿವೆ, ನಿಮ್ಮ ಪ್ರಧಾನಿ ಸಮಯದ ಬಗ್ಗೆ ಹೇಳಿ
-ಸಮ್ಮಿಶ್ರ ಸರ್ಕಾರದಲ್ಲಿ, ತಂಡದ ನಾಯಕನ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಆತನ ಬದ್ಧತೆ ಮತ್ತು ಸಾಮೂಹಿಕವಾಗಿ ದೇಶದ ಅಭಿವೃದ್ಧಿ ಕೆಲಸಗಳನ್ನು ಹೇಗೆ ಮುನ್ನಡೆಸಿಕೊಂಡು ಹೋಗುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್ ಆರ್ ಸುಬ್ರಹ್ಮಣ್ಯನ್ ತಮ್ಮ ಪುಸ್ತಕದಲ್ಲಿ, ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡ ಹಲವು ನಿರ್ಧಾರಗಳಾದ ಕಾಶ್ಮೀರ ವಿವಾದ, ಚೀನಾ ಮತ್ತು ರಷ್ಯಾ ಜೊತೆ ಸಂಬಂಧ, ಬಾಂಗ್ಲಾದೇಶದ ಜೊತೆಗಿನ ಜಲ ವಿವಾದ, ದೆಹಲಿ ಮೆಟ್ರೊ ಯೋಜನೆ, ಟೆಲಿಕಾಂ ನೀತಿ, ಮಹಿಳೆಯರಿಗೆ ಮೀಸಲಾತಿ ಹೀಗೆ ಹಲವು ವಿಷಯಗಳ ಬಗ್ಗೆ ಬರೆದಿದ್ದಾರೆ. ನಾವು ಭ್ರಷ್ಟಾಚಾರ ರಹಿತ ಆಡಳಿತವನ್ನು ಹೇಗೆ ನೀಡಿದ್ದೆವು, ಮೈತ್ರಿ ಸರ್ಕಾರ ಹೇಗೆ ಉತ್ತಮ ಆಡಳಿತ ನೀಡಬಹುದು ಎಂಬುದನ್ನು ಕೂಡ ಹೇಳಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿ ಸಾಧ್ಯವೇ, ಇತ್ತೀಚಿನ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಗ್ಗೆ ಏನು ಹೇಳುತ್ತೀರಿ?
-ಪಶ್ಚಿಮ ಬಂಗಾಳದಲ್ಲಿ ಉತ್ತಮ ಸ್ಪರ್ಧೆ ಏರ್ಪಟ್ಟಿತು. ಎಲ್ಲರೂ ಬಿಜೆಪಿ ಬರುತ್ತದೆ ಎಂದು ಭಾವಿಸಿದ್ದರು, ಆದರೆ ಮಮತಾ ಬ್ಯಾನರ್ಜಿಯವರಿಗೆ ಜನರಿಂದ ಉತ್ತಮ ಸ್ಪರ್ಧೆ ಸಿಕ್ಕಿತು, ಬಹುಮತದಿಂದ ಗೆದ್ದರು. ಒಂದು ಹಂತದವರೆಗೆ ಇತ್ತೀಚಿನ ಚುನಾವಣೆಯಲ್ಲಿ ಮೋದಿಯವರಿಗೆ ಸೋಲು ಸಿಕ್ಕಿದೆ. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೇಗೆ ಮುನ್ನಡೆಯುತ್ತದೆ ಎಂದು ನೋಡಬೇಕು. ಅವೆರಡೂ ರಾಷ್ಟ್ರೀಯ ಪಕ್ಷಗಳಾಗಿರುವುದರಿಂದ ಅದು ಮುಖ್ಯವಾಗುತ್ತದೆ. ಸ್ಥಳೀಯ ಪಕ್ಷಗಳನ್ನು ತೆಗೆದುಕೊಂಡರೆ ಅವು ಸಾಕಷ್ಟು ಕೆಲಸ ಮಾಡಬೇಕು. ಹಿಂದೆ ನಮ್ಮ ದೇಶದಲ್ಲಿ ಜ್ಯೋತಿ ಬಸು, ಕರುಣಾನಿಧಿಯಂತಹ ಪ್ರಬಲ ಸ್ಥಳೀಯ ರಾಜಕೀಯ ನಾಯಕರಿದ್ದರು. ಭವಿಷ್ಯದಲ್ಲಿ ಏನಾಗುತ್ತದೆ ನೋಡಬೇಕು.

ಕೋವಿಡ್ ಬಗ್ಗೆ ನೀವು ಸೇರಿದಂತೆ ವಿರೋಧ ಪಕ್ಷದ ನಾಯಕರು ಕೇಂದ್ರಕ್ಕೆ ಬರೆದಿದ್ದೀರಿ ಅಲ್ಲವೇ?
-ಹೌದು, ಜನರು ಎದುರಿಸುವ ಸಮಸ್ಯೆಗಳ ಬಗ್ಗೆ ನಾನು ಸರ್ಕಾರಕ್ಕೆ ಬರೆಯುತ್ತಿರುತ್ತೇನೆ. ಇಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಯಿರುವುದಿಲ್ಲ. ಸಂಸತ್ತು ಅಧಿವೇಶನ ಇಲ್ಲದಿರುವುದರಿಂದ ಪ್ರಧಾನಿಗೆ ಪತ್ರ ಬರೆದೆ.

ಕೇಂದ್ರದಲ್ಲಿ ಮತ್ತೆ ಮೈತ್ರಿ ಸರ್ಕಾರ ಬರಬಹುದೇ?
-ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಯಾವ ರೀತಿಯ ಆಡಳಿತ ನೀಡುತ್ತದೆ ಎಂಬುದರ ಮೇಲೆ ಅದರ ಭವಿಷ್ಯ ಕೇಂದ್ರದಲ್ಲಿ ನಿಂತಿದೆ. ಇಂದು ಆ ಬಗ್ಗೆ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಲಸಿಕೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಉಳಿತ ಜಾತ್ಯತೀತ ಪಕ್ಷಗಳೊಂದಿಗೆ ಹೇಗೆ ಸಹಕರಿಸುತ್ತಿದೆ ಎಂದು ಕೂಡ ಮುಖ್ಯವಾಗುತ್ತದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅದರ ಸ್ಥಾನವನ್ನು ಬಲಪಡಿಸುತ್ತದೆಯೇ?
-ಕಾಂಗ್ರೆಸ್ ನವರು ಮಾಡಿಕೊಳ್ಳಲಿ, ನನಗೂ ಅದಕ್ಕೂ ಸಂಬಂಧವಿಲ್ಲ. ಸಹಜವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಕೆಲಸ ಮಾಡಿ 2023ರಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com