'ಮಗನನ್ನು ಮಂತ್ರಿ ಮಾಡಿದ್ದಕ್ಕಾಗಿ ಖರ್ಗೆ ಸೋತರು: ಪುತ್ರನನ್ನು ಶಾಸಕನಾಗಿಸುವ ಉಮೇದಿನಲ್ಲಿ ಸಿದ್ದರಾಮಯ್ಯ ಸೋತರು!'

ರಾಜ್ಯದಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಪ್ರತಿಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್
ಸಿದ್ದರಾಮಯ್ಯ ಮತ್ತು ಶಿವಕುಮಾರ್
Updated on

ಬೆಂಗಳೂರು: ರಾಜ್ಯದಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಪ್ರತಿಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಜನಾಕ್ರೋಶದ ಬಿಸಿಯಲ್ಲೇ ಅಲ್ಲವೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬೀದಿಗೆ ಬಂದದ್ದು ಎಂದು ಬಿಜೆಪಿ ಪ್ರಶ್ನಿಸಿದೆ. ರಾಜ್ಯದಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ಸಿಗರೇ ಯಾರ ವಿರುದ್ಧ ಈ ಜನಾಕ್ರೋಶ? 60 ವರ್ಷಗಳ ಕಾಲ ದೇಶ ಆಳಿದ ನಂತರವೂ ಅಸಮಾನತೆ, ಬಡತನವನ್ನು ಜೀವಂತವಿಟ್ಟ ಕಾರಣಕ್ಕಾಗಿ ಜನಾಕ್ರೋಶ ಸಭೆ ನಡೆಸುತ್ತೀರಾ’ ಎಂದು ಟ್ವೀಟ್‌ ಮಾಡಿದೆ.

‘ಕಾಂಗ್ರೆಸ್ಸಿಗರೇ‌, ನೀವು ಭಾರತೀಯರಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಮರೆಯಲು ಸಾಧ್ಯವೇ? ಈ ಕಾರಣಕ್ಕಾಗಿ ಜನರೇ ನಿಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನಾಕ್ರೋಶದ ಬಿಸಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬೀದಿಗೆ ಬಂದಿರುವುದು ನಿಜವಲ್ಲವೇ? ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ, ‘ನಿಮ್ಮನ್ನು‌ ನೀವೇ ಕಾಂಗ್ರೆಸ್ ರಥ ಎಳೆಯುವ ಡಬಲ್ ಎಂಜಿನ್ ಎಂದು ಬಿಂಬಿಸಿಕೊಂಡಿದ್ದೀರಿ, ಶುಭವಾಗಲಿ! ನಿಮ್ಮ ಡಬಲ್ ಎಂಜಿನ್ ಸಂಘಟನೆ ಸಂದರ್ಭದಲ್ಲಾದರೂ ದಲಿತ ಮುಖ್ಯಮಂತ್ರಿ ವಿಚಾರ ನನಸಾಗುವುದೇ? ದಲಿತರಿಗೆ ಮುಖ್ಯಮಂತ್ರಿ‌ ಪಟ್ಟ ಕಟ್ಟಲು ನಾವು ಬದ್ಧ ಎಂದು ಘೋಷಿಸಿ ನೋಡೋಣ’ ಎಂದು ಸವಾಲೆಸೆದಿದೆ.

‘ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೇ ಜನಾಕ್ರೋಶದ ಎದುರು ರಾಹುಲ್ ಗಾಂಧಿ ಸ್ವಕ್ಷೇತ್ರದಲ್ಲಿ ಸೋತರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಕೇವಲ 1 ಗೆಲುವು, ಬಹುಮತದಲ್ಲಿದ್ದ ಸರ್ಕಾರ 70 ಸ್ಥಾನಕ್ಕೆ‌ ಇಳಿಯಿತು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ನಿರಂತರವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್ ಪಕ್ಷ ಎನ್ನುವುದು ಒಂದು‌ ಪಕ್ಷವಲ್ಲ, ಅದು ಪ್ರಭಾವಿಗಳ ಕುಟಿಲ ಕೂಟ. ದೇಶವನ್ನು ಅನೇಕ ವರ್ಷಗಳ ಕಾಲ ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದು ಇದೇ ನಕಲಿ ಕುಟುಂಬ. ಜನಾಕ್ರೋಶ ʼದ ಬಿಸಿಯಲ್ಲಿ ಕಾಂಗ್ರೆಸ್‌ ಪಕ್ಷ ಸುಟ್ಟು ಹೋಗುತ್ತಿದೆ ಎಂಬುದು ನೆನಪಿರಲಿ.

ಈ ದೇಶದಲ್ಲಿ ಜನಾಕ್ರೋಶವಿದೆ,  ಕುಟುಂಬ ರಾಜಕಾರಣದ ವಿರುದ್ಧ,  ಕೋಮು ಓಲೈಕೆಯ ವಿರುದ್ಧ,  ಭ್ರಷ್ಟಾಚಾರದ ವಿರುದ್ಧ,  ಸ್ವಜನ ಪಕ್ಷಪಾತದ ವಿರುದ್ಧ, ಬಡವರು ಬಡವರಾಗಿಯೇ ಇರಬೇಕೆಂಬ ನಿಲುವಿನ ವಿರುದ್ಧ ಇವೆಲ್ಲವನ್ನು ದೇಶದಲ್ಲಿ ಕಾಂಗ್ರೆಸ್ ಜೀವಂತವಾಗಿಟ್ಟಿದೆ.

ಮಗನನ್ನು ಮಂತ್ರಿ ಮಾಡಿದ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಸೋತರು. ಮಗನನ್ನು ಶಾಸಕನಾಗಿಸುವ ಉಮೇದಿನಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಡಿಕೆಶಿ ಅವರೇ, ನಿಮಗೆ ಮಗಳನ್ನು ರಾಜಕೀಯಕ್ಕೆ ಕರೆ ತರುವ ಕನಸಿದೆಯೇ ? ಇದ್ದರೆ  ಜನಾಕ್ರೋಶ ಎದುರಿಸಲು ಸಿದ್ಧರಾಗಿ ಎಂದು ಟೀಕಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com