ಯಡಿಯೂರಪ್ಪನವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ, ಅವರಿಗೆ ಮದುವೆ ಊಟ ಮಾಡಿ ಗೊತ್ತಿಲ್ಲ, ಬರೀ ತಿಥಿ ಊಟ ಮಾಡೋದು: ಸಿದ್ದರಾಮಯ್ಯ 

ರಾಜ್ಯದಲ್ಲಿ ಬಿ ಎಸ್​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ, ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ, ಬಿಜೆಪಿ ಒಂದು ಭ್ರಷ್ಠ ಪಕ್ಷವಾಗಿದ್ದು, ಅದರಲ್ಲಿರುವವರು ಭ್ರಷ್ಠರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಪದ್ಮನಾಭ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಪದ್ಮನಾಭ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಬಿ ಎಸ್​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ, ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ, ಬಿಜೆಪಿ ಒಂದು ಭ್ರಷ್ಠ ಪಕ್ಷವಾಗಿದ್ದು, ಅದರಲ್ಲಿರುವವರು ಭ್ರಷ್ಠರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ವಯಸ್ಸು ಆಗಿದೆ ಎಂದು ಸಿಎಂ ಸ್ಥಾನದಿಂದ ಹೈಕಮಾಂಡ್  ತೆಗೆದಿಲ್ಲ. ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು. ಅಪ್ಪ-ಮಗ ಸೇರಿ ಬೇಕಾದಷ್ಟು ಭ್ರಷ್ಟಾಚಾರ ನಡೆಸಿ ಲೂಟಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಐಟಿ, ಇಡಿ  ದಾಳಿ ನಡೆಯಬಹುದು  ಎಂದು ಹೇಳಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಾರೆ. ಆರ್​ಟಿಜಿಎಸ್ ಮೂಲಕ ಯಡಿಯೂರಪ್ಪ ಹಣ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಮದುವೆ ಊಟ ಮಾಡೇ ಇಲ್ಲ. ಬರೀ ತಿಥಿ ಊಟ ಮಾಡಿದವರು ಅವರು. ಅವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ. ಹಿಂಬಾಗಿಲಿಂದ ಬಂದವರೇ. ನಮ್ಮ ಶಾಸಕರನ್ನು ಕರೆದುಕೊಂಡು ಸರ್ಕಾರ‌ ಮಾಡಿದರು ಎಂದು ದೂರಿದರು.

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬಗ್ಗೆ ಈಗ ಮಾತಾಡಲ್ಲ. ಮೂರ್ನಾಲ್ಕು ತಿಂಗಳು ಬಿಟ್ಟು ಮಾತನಾಡುತ್ತೇನೆ, ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಡಿಯೂರಪ್ಪ. ಹಾಗಾಗಿ ಅವರು ಏನು ಮಾಡ್ತಾರೆ? ರಬ್ಬರ್ ಸ್ಟ್ಯಾಂಪ್ ಆಗುತ್ತಾರಷ್ಟೆ ಎಂದರು.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸಾವಿರಾರು ಜನರು ಸತ್ತರು, ಇದಕ್ಕೆ ಯಾರು ಕಾರಣ, ಅದನ್ನು ತಡೆಯಬೇಕಾದವರು ಆಡಳಿತ ಪಕ್ಷದಲ್ಲಿರುವ ನಾಯಕರು ಅಧಿಕಾರಿಗಳೊಂದಿಗೆ ಸೇರಿ ಸರಿಯಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಮಾತ್ರವಲ್ಲವೇ. ಈ ಕ್ಷೇತ್ರದಲ್ಲಿ ಕೊರೋನಾ ಬರೋಕೆ ಯಾರು ಕಾರಣ, ಶಾಸಕ ಆರ್ ಅಶೋಕ್ ಕಾರಣವಲ್ಲವೇ, ಅವರು ಕಂದಾಯ ಮಂತ್ರಿಯಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ. ನಾವು ಕಂಡು, ಕೇಳಿರಲಿಲ್ಲ. ಚೀನಾದಿಂದ ನಮ್ಮ ದೇಶಕ್ಕೆ ಬಂದಿದೆ.. ಕೋವಿಡ್ ಬರೋಕೆ ನಾವು ಕಾರಣನಾ? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ. ಕೋವಿಡ್ ಬರೋಕೆ ಈ ಕ್ಷೇತ್ರದ ಆರ್ ಅಶೋಕ ಕಾರಣ, 6 ಸಾರಿ ಅಶೋಕ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದೀರಿ, ಈ ಬಾರಿ ಸೋಲಿಸಿ, ಬದಲಾವಣೆ ತನ್ನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಾರ್ಹವಾಗಿ  ಟೀಕಿಸಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡರು. 

ಇನ್ನೊಂದು ಆರೇಳು ತಿಂಗಳು ಅಷ್ಟೆ, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಗಳು ಎಚ್ಚರಿಕೆಯಿಂದ ಇರಬೇಕು. ಅಶೋಕ ಒಬ್ಬ ಶಾಸಕ ಅಷ್ಟೇ, ಸರ್ಕಾರದ ಹಣವೆಂದರೆ ಜನರ ಹಣ, ಅದು ಜನರ ತೆರಿಗೆ ಹಣ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ 12 ಕೋಟಿ ಉದ್ಯೋಗ ನಷ್ಟವಾಗಿದೆ, ಮೋದಿ..ಮೋದಿ ಎಂದು ಜಪ ಮಾಡುತ್ತಿದ್ದ ಯುವಕರಿಗೆ ಇಂದು ಮೋದಿ ಮೂರು ತಿರುಪತಿ ತಿಮ್ಮಪ್ಪ ನಾಮ ಹಾಕಿ ಬಿಟ್ಟಿದ್ದಾರೆ ಎಂದು ಮೂದಲಿಸಿದರು.

ಬಾದಾಮಿಯಲ್ಲಿ ನಿಲ್ಲುತ್ತೇನೆ: ಪ್ರಜಾಪ್ರಭುತ್ವದಲ್ಲಿ ಯಾರು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ನೋಡಿಕೊಂಡು ಜನರು ಬದಲಾವಣೆ ಮಾಡಲೇಬೇಕು. ಮುಂದಿನ ಸಾರಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ, ಬದಲಾವಣೆ ತನ್ನಿ, ನಾನು ಬಾದಾಮಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com