ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ
ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಇಂದು 29 ಮಂದಿ ಸಚಿವರು ಪ್ರಮಾಣ ವಚನ, ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಚಿವರ ವಿವರ ನೀಡಿದ್ದಾರೆ. ನೂತನ ಸಚಿವರು ಅಪರಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನೂತನ ಸಚಿವರು ಅಪರಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಪ್ರವಾಸ ಹೋಗಿ ಪ್ರವಾಹ ಪೀಡಿತರಿಗೆ, ಭೂಕುಸಿತದಲ್ಲಿ ಮನೆ ಮಠ ಕಳೆದುಕೊಂಡವರಿಗೆ ಸ್ಥಳದಲ್ಲಿಯೇ ಪರಿಹಾರ ಪ್ರಕಟಿಸಿದ್ದೇನೆ, ಅದಕ್ಕೂ ಮೊದಲು ಮುಖ್ಯಮಂತ್ರಿಯಾದ ಕೂಡಲೇ ಸಚಿವ ಸಂಪುಟದಲ್ಲಿ ರೈತರ ಮಕ್ಕಳಿಗೆ 1ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಶಿಷ್ಯ ವೇತನ ಯೋಜನೆಯನ್ನು ಪ್ರಕಟ ಮಾಡಿದ್ದೇವೆ.ನಮ್ಮ ಸಾಮಾಜಿಕ ಭದ್ರತೆ ಯೋಜನೆಯಡಿ ವೇತನವನ್ನು ಹೆಚ್ಚಿಸಿದ್ದೇವೆ ಎಂದರು.

ಇವತ್ತು ಬೆಳಿಗ್ಗೆ ನೂತನ ಸಚಿವರ ಪಟ್ಟಿ ಅಂತಿಮವಾಗಿದ್ದು, ಇಂದು 29 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯದ ಏಳಿಗೆ, ಪ್ರದೇಶವಾರು, ಜಾತೀಯವಾರು ಸಮಾನತೆ ನೋಡಿಕೊಂಡು ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದರು.

ಇಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿದ್ದು: ನನ್ನ ನೂತನ ಮಂತ್ರಿ ಮಂಡಲ ವಿಸ್ತರಣೆಗೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಚರ್ಚೆ ನಡೆಸಿ ನಿನ್ನೆ ರಾತ್ರಿ ಅಂತಿಮ ಸುತ್ತಿನ ಮಾತುಕತೆಯಾಗಿ ಇಂದು ಬೆಳಗ್ಗೆ ಪಟ್ಟಿ ಅಂತಿಮವಾಯಿತು. ರಾಜ್ಯಪಾಲರ ಜೊತೆ ಮಾತನಾಡಿ ನೂತನ ಸಚಿವರ ಪಟ್ಟಿ ಕಳುಹಿಸಿದ್ದೇನೆ ಎಂದರು.

29 ಸಚಿವರು ಪ್ರಮಾಣವಚನ: ಇಂದು ಒಟ್ಟು 29 ಸಚಿವರು ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ, ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಮಂತ್ರಿ ಮಂಡಲದಲ್ಲಿ ಶಾಸಕರ ಅನುಭವ ಮತ್ತು ಹೊಸ ಶಕ್ತಿಯ ಸಮ್ಮಿಶ್ರಣದ ಸಚಿವ ಸಂಪುಟದಲ್ಲಿರುತ್ತದೆ ಎಂದರು.

ಈ ಬಾರಿ ಸಂಪುಟದಲ್ಲಿ 7 ಮಂದಿ ಒಬಿಸಿ, ಮೂರು ಮಂದಿ ಎಸ್ಸಿ, ಒಬ್ಬ ಎಸ್ ಟಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ. 7 ಮಂದಿ ಒಕ್ಕಲಿಗರು, 8 ಮಂದಿ ಲಿಂಗಾಯತರು, ಒಬ್ಬ ಮಹಿಳೆ, ಒಬ್ಬ ರೆಡ್ಡಿ ಸಮುದಾಯದವರು ಇರುತ್ತಾರೆ.

13 ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯವಿಲ್ಲ - ಮೈಸೂರು, ಕಲ್ಬುರ್ಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೋಲಾರ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಈ ಬಾರಿ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯವಿಲ್ಲ, ಬೆಂಗಳೂರು ನಗರಕ್ಕೆ 7 ಸಚಿವ ಭಾಗ್ಯ ಸಿಕ್ಕಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com