ಬೆಂಗಳೂರು: ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಗದ್ದೆ ನಾಟಿ ಮಾಡಿ ಗಮನ ಸೆಳೆದರು. ರೈತ ಮಹಿಳೆಯರ ಜೊತೆ ಗದ್ದೆಗೆ ಇಳಿದ ಶೋಭಾ 5 ನಿಮಿಷಗಳ ಕಾಲ ನಾಟಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಜೊತೆ ಟ್ರ್ಯಾಕ್ಟರ್ ಏರಿ ನಾಟಿ ಯಂತ್ರದ ಮೂಲಕವೂ ನಾಟಿ ಮಾಡಿದರು. ನಂತರ ಸಾತನೂರು ಗ್ರಾಮದ ಆಲೆಮನೆಗೆ ತೆರಳಿ ಬೆಲ್ಲ ತಯಾರಾಗುವ ಪ್ರಕ್ರಿಯೆ ವೀಕ್ಷಿಸಿದರು. ಕ್ರಷರ್ಗೆ ಕಬ್ಬು ಕೊಟ್ಟರು, ಬೆಲ್ಲದ ರುಚಿ ನೋಡಿದರು. ಜನಶೀರ್ವಾದ ಯಾತ್ರೆಯ ಅಂಗವಾಗಿ ಟಿ.ನರಸೀಪುರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ಸಾಧನೆಗಳನ್ನು ತಿಳಿಸಲಾಯಿತು. ಕೃಷಿ ಇಲಾಖೆಯಲ್ಲಿನ ಜನಪರ ಯೋಜನೆಗಳು, ರೈತರ ಕಲ್ಯಾಣಕ್ಕಾಗಿ ಕೈಗೊಂಡ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು.
ಮತ್ತೊಬ್ಬ ಕೇಂದ್ರ ಸಚಿವ ಭಗವಂತ ಖೂಬಾ ಬೀದರ್ನಲ್ಲಿ ರೋಡ್ಶೋ ನಡೆಸಿದರು. ಅವರು ಬೀದರ್ನ ರಾಮಕೃಷ್ಣ ಆಶ್ರಮಕ್ಕೂ ಭೇಟಿ ನೀಡಿದರು. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು ರಾಜೀವ್ ಚಂದ್ರಶೇಖರ್ ಹುಬ್ಬಳ್ಳಿಯಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡರು. ನಂತರ ಉತ್ತರ ಕನ್ನಡಕ್ಕೆ ಭೇಟಿ ನೀಡಿದರು.
ಅವರು ತಮ್ಮ ಪ್ರವಾಸದ ಸಮಯದಲ್ಲಿ ಜನಸಂಘದ ನಾಯಕರನ್ನು ಭೇಟಿ ಮಾಡಿದರು ಮತ್ತು ಸಿದ್ದಾರೂಢ ಮಠದಲ್ಲಿ 'ಗೋಪೂಜೆ' ಸಲ್ಲಿಸಿದ ನಂತರ ಕೋವಿಡ್ -19 ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ಬಿಜೆಪಿ ಪ್ರಧಾನ ಕಚೇರಿಯಿಂದ ತಮ್ಮ ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಹೈಲೈಟ್ ಮಾಡುವ ಪಕ್ಷದ ಕಾರ್ಯತಂತ್ರದ ಭಾಗವಾಗಿ ಖೂಬಾ ಮತ್ತು ಚಂದ್ರಶೇಖರ್ ಅವರು ಕ್ರಮವಾಗಿ ಬೀದರ್ ಮತ್ತು ಹುಬ್ಬಳ್ಳಿಯ ಸಾರ್ವಜನಿಕ ಪಡಿತರ ವಿತರಣಾ ಅಂಗಡಿಗಳಿಗೆ ಭೇಟಿ ನೀಡಿದರು.
Advertisement