ಸುವರ್ಣಸೌಧ ಪ್ರವೇಶಿಸಲು ಬಿಡಬೇಡಿ, ರಮೇಶ್ ಕುಮಾರ್ ಅವರನ್ನು ಪಕ್ಷದಿಂದ ಕಿತ್ತೊಗೆಯಿರಿ: ಕಾಂಗ್ರೆಸ್ ಗೆ ಶೋಭಾ ಆಗ್ರಹ
ಅತ್ಯಾಚಾರವನ್ನು ಆನಂದಿಸಿ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆ ರಾಜ್ಯಾದ್ಯಂತ ಭಾರೀ ಕೋಲಾಹಲ ಎಬ್ಬಿಸಿತ್ತು.
Published: 18th December 2021 08:59 AM | Last Updated: 18th December 2021 01:02 PM | A+A A-

ರಮೇಶ್ ಕುಮಾರ್
ಬೆಂಗಳೂರು: ಅತ್ಯಾಚಾರವನ್ನು ಆನಂದಿಸಿ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆ ರಾಜ್ಯಾದ್ಯಂತ ಭಾರೀ ಕೋಲಾಹಲ ಎಬ್ಬಿಸಿತ್ತು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರ ಮನಸ್ಥಿತಿ ಕಂಡು ಬೇಸರವಾಗುತ್ತಿದೆ, ರಮೇಶ್ ಕುಮಾರ್ ಅವರನ್ನು ಸುವರ್ಣ ಸೌಧ ಪ್ರವೇಶಿಸಲು ಬಿಡಬಾರದು, ಪ್ರಜಾಪ್ರಭುತ್ವದ ದೇವಾಲಯದ ಪಾವಿತ್ರ್ಯತೆಯನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಅವರನ್ನುಪಕ್ಷದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಕ್ಷಮೆಯಾಚಿಸಿದ್ದಾರೆ. ನಿನ್ನೆ ನಡೆದ ಕಲಾಪದಲ್ಲಿ ನಮ್ಮದೇ ಶಾಸಕರೊಬ್ಬರು ಆಡಿದ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮಹಿಳೆಯರ ವಿರುದ್ಧದ ಅಸಂವೇದನಾಶೀಲ ಹೇಳಿಕೆಗಳು ಲಿಂಗ ಸಮಾನತೆಯ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿರುವ ನನಗೆ ಕಾಂಗ್ರೆಸ್ ಶಾಸಕರೊಬ್ಬರು ಇಂತಹ ಮಾತುಗಳನ್ನು ಆಡಿದ್ದಕ್ಕೆ ಅತೀವ ಬೇಸರವಾಗಿದೆ. ಕರ್ನಾಟಕದ ಎಲ್ಲಾ ಮಹಿಳೆಯರು ಕ್ಷಮಿಸಿ ಬಿಡಿ. ಅಲ್ಲದೆ ಈ ರೀತಿಯ ಮಾತುಗಳು ಎಂದಿಗೂ ಪುನರಾವರ್ತನೆಯಾಗದಂತೆ ನಾನು ಖಚಿತಪಡಿಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.
ಇದನ್ನೂ ಓದಿ: ಮುದುಕಿಗೆ ಶೃಂಗಾರ ಮಾಡುವುದನ್ನು ಬಿಡಿ; ಮನೆ- ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡಿ; ಶಾಸಕರ ಮರ್ಯಾದೆ ಉಳಿಸಿ!
ಶಾಸಕರ ಹೇಳಿಕೆ ಖಂಡನೀಯ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ರಾಜ್ಯವರ್ಧನ್ ರಾಥೋಡ್ ಹೇಳಿದ್ದಾರೆ. ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾಗ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಗುತ್ತಿದ್ದರು, ಅದನ್ನೂ ಬೇರೆ ರೀತಿಯಲ್ಲಿ ಊಹಿಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಆದರೆ ರಮೇಶ್ ಕುಮಾರ್ ಮಾತನಾಡುತ್ತಿದ್ದಾಗ ಸ್ಪೀಕರ್ ನಗುತ್ತಾ ಸುಮ್ಮನೆ ಕುಳಿತಿದ್ದದ್ದು ಖಂಡನೀಯ ಎಂದು ಬಿಜೆಪಿ ಸಂಸದ ಅಪರಾಜಿತಾ ಸಾರಂಗಿ ಬೇಸರ ವ್ಯಕ್ತ ಪಡಿಸಿದ್ದಾರೆ.