ಮುಖ್ಯಮಂತ್ರಿ ಬದಲಾವಣೆ ದಟ್ಟ ವದಂತಿ: ಮಂಡಿನೋವಿನ ಚಿಕಿತ್ಸೆಗೆ ವಿಶ್ರಾಂತಿ ಪಡೆಯುತ್ತಾರೆಯೇ ಸಿಎಂ ಬೊಮ್ಮಾಯಿ?

ಮುಖ್ಯಮಂತ್ರಿ ಸ್ಥಾನದಿಂದ ಸದ್ಯದಲ್ಲಿಯೇ ಬಸವರಾಜ ಬೊಮ್ಮಾಯಿಯವರು ಕೆಳಗಿಳಿಯುತ್ತಾರೆ ಎಂಬ ಊಹಾಪೋಹಗಳ ಮಧ್ಯೆ ಸಂಕ್ರಾಂತಿ ಕಳೆದ ನಂತರ ಮಂಡಿನೋವಿನ ಚಿಕಿತ್ಸೆಗೆ ಕೆಲ ದಿನಗಳ ಕಾಲ ಮುಖ್ಯಮಂತ್ರಿಗಳು ತಮ್ಮ ಕೆಲಸ ಕಾರ್ಯಗಳಿಂದ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸದ್ಯದಲ್ಲಿಯೇ ಬಸವರಾಜ ಬೊಮ್ಮಾಯಿಯವರು ಕೆಳಗಿಳಿಯುತ್ತಾರೆ ಎಂಬ ಊಹಾಪೋಹಗಳ ಮಧ್ಯೆ ಸಂಕ್ರಾಂತಿ ಕಳೆದ ನಂತರ ಮಂಡಿನೋವಿನ ಚಿಕಿತ್ಸೆಗೆ ಕೆಲ ದಿನಗಳ ಕಾಲ ಮುಖ್ಯಮಂತ್ರಿಗಳು ತಮ್ಮ ಕೆಲಸ ಕಾರ್ಯಗಳಿಂದ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಮುಖ್ಯಮಂತ್ರಿ ಬೊಮ್ಮಾಯಿಯವರು ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಲಿದ್ದಾರೆ ಎಂಬ ಊಹಾಪೋಹ, ವದಂತಿಗಳಿವೆಯಾದರೂ ವಿದೇಶಕ್ಕೆ ಹೋಗದೆ ಬೊಮ್ಮಾಯಿಯವರು ಸಣ್ಣ ಮಟ್ಟಿನ ವಿಶ್ರಾಂತಿ ತೆಗೆದುಕೊಂಡು ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. 

ಬೊಮ್ಮಾಯಿಯವರು ಇತ್ತೀಚೆಗೆ ತಮ್ಮ ಹುಟ್ಟೂರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವ ಹುದ್ದೆಯೂ ಶಾಶ್ವತವಲ್ಲ, ನಮ್ಮ ಸಮಯ ಬಂದಾಗ ಕೆಳಗಿಳಿಯಲೇಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು. ಅಲ್ಲಿಂದ ಮುಖ್ಯಮಂತ್ರಿ ಹುದ್ದೆಯಿಂದ ಅವರು ಸದ್ಯದಲ್ಲಿ ಕೆಳಗಿಳಿಯುತ್ತಾರೆ ಎಂಬ ಊಹಾಪೋಹಗಳು, ಮಾತುಗಳು ಕೇಳಿಬರುತ್ತಿವೆ. 

ಸಂಕ್ರಾಂತಿ ಕಳೆದ ನಂತರ ಬೊಮ್ಮಾಯಿಯವರು ಅಮೆರಿಕಕ್ಕೆ ಮಂಡಿನೋವಿನ ಚಿಕಿತ್ಸೆಗೆ ತೆರಳುತ್ತಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಅವರ ಮಗ ಇತ್ತೀಚೆಗೆ ಅಮೆರಿಕಕ್ಕೆ ಹೋಗಿ ಬಂದಿದ್ದರು. ಮುಖ್ಯಮಂತ್ರಿಗಳು ವೀಸಾಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೂ ಅಧಿಕೃತವಿಲ್ಲ, ಸಿಎಂ ಕಚೇರಿ ಕೂಡ ದೃಢಪಡಿಸಿಲ್ಲ. 
ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕರೊಬ್ಬರನ್ನು ಕೇಳಿದಾಗ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತು ವಿಧಿಸಿ ಮಾತನಾಡಿ, ಬೊಮ್ಮಾಯಿಯವರು ಸದ್ಯ ಬೆಳಗಾವಿ ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 24ರ ನಂತರವಷ್ಟೇ ನಮಗೆ ಈ ಬಗ್ಗೆ ಸ್ಪಷ್ಟತೆ ಸಿಗುತ್ತದೆ ಎಂದಿದ್ದಾರೆ.

ಬಿಜೆಪಿಯ ಹಿರಿಯ ನಾಯಕರು ರಾಜ್ಯದಲ್ಲಿ ಮುಖ್ಯಮಂತ್ರಿ ಪದವಿ ಬದಲಾವಣೆ ವಿಷಯವನ್ನು ಅಲ್ಲಗಳೆಯುತ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದರು, ಆದರೆ 2023ರ ವಿಧಾನಸಭೆ ಚುನಾವಣೆ ಬೊಮ್ಮಾಯಿಯವರ ನಾಯಕತ್ವದಲ್ಲಿ ಬಿಜೆಪಿಯಲ್ಲಿ ನಡೆಯಲಿಕ್ಕಿಲ್ಲ ಎಂಬ ಸುಳಿವು ನೀಡಿದರು. ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 2023ರ ಚುನಾವಣೆ ಬೊಮ್ಮಾಯಿಯವರ ನಾಯಕತ್ವದಲ್ಲಿಯೇ ನಾವು ಎದುರಿಸುತ್ತೇವೆ ಎಂದಿದ್ದರು. 

ಇನ್ನು ಮುರುಗೇಶ್ ನಿರಾಣಿಯವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಮಾಜಿ ಸಿಎಂ ಯಡಿಯೂರಪ್ಪ ವ್ಯಾಖ್ಯಾನಿಸಿದ್ದಾರೆ. ಬೊಮ್ಮಾಯಿಯವರು ಮುಖ್ಯಮಂತ್ರಿ ಪದವಿಯಿಂದ ಇಳಿದರೆ ಮುಂದೆ ಯಾರಾಗುತ್ತಾರೆ ಎಂಬುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಜಯಪುರ ಶಾಸಕ ಬಸವರಾಜ ಯತ್ನಾಳ್, ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಮೊದಲಾದವರ ಹೆಸರುಗಳು ಕೇಳಿಬರುತ್ತಿವೆ.

ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿನ ಫಲಿತಾಂಶ ಬಿಜೆಪಿಯಲ್ಲಿ ಸಮಾಧಾನ ತಂದಿಲ್ಲ. ಬೊಮ್ಮಾಯಿಯವರು ನಿರಂತರವಾಗಿ ದೆಹಲಿಗೆ ಹೋಗುತ್ತಾ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುತ್ತಲೇ ಇದ್ದಾರೆ. ನಮಗೇನೂ ಗೊತ್ತಿಲ್ಲ, ನಮ್ಮ ಜೊತೆ ಇದುವರೆಗೆ ಯಾರೂ ಬಹಿರಂಗವಾಗಿ ಮುಕ್ತವಾಗಿ ಮಾತನಾಡಿಲ್ಲ ಎಂದು ಹಿರಿಯ ಸಚಿವರೊಬ್ಬರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com