ಜೆಡಿಎಸ್ ನಲ್ಲಿ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣ; ಅವರಿಂದ ಎಚ್ ಡಿಕೆ ಸಂಸ್ಕಾರ ಕಲಿಯಲಿ: ಸುಮಲತಾ

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಷ್ಟಪಟ್ಟು ಕಟ್ಟಿರುವ ಪಕ್ಷವನ್ನು ಉಳಿಸಲು ಇರುವ ಒಂದೇ ಒಂದು ಆಶಾಕಿರಣವೆಂದರೆ ಸಂಸದ ಪ್ರಜ್ವಲ್‌ ರೇವಣ್ಣ. ಅವರನ್ನು ನೋಡಿ ಸಂಸ್ಕಾರ ಎಂದರೇನು ಎಂಬುದನ್ನು ಕಲಿಯಿರಿ.
ಸುಮಲತಾ ಅಂಬರೀಶ್-ಎಚ್ ಡಿ ಕುಮಾರಸ್ವಾಮಿ
ಸುಮಲತಾ ಅಂಬರೀಶ್-ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಷ್ಟಪಟ್ಟು ಕಟ್ಟಿರುವ ಪಕ್ಷವನ್ನು ಉಳಿಸಲು ಇರುವ ಒಂದೇ ಒಂದು ಆಶಾಕಿರಣವೆಂದರೆ ಸಂಸದ ಪ್ರಜ್ವಲ್‌ ರೇವಣ್ಣ. ಅವರನ್ನು ನೋಡಿ ಸಂಸ್ಕಾರ ಎಂದರೇನು ಎಂಬುದನ್ನು ಕಲಿಯಿರಿ’ ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್‌ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟು ಸುರಕ್ಷತೆ ವಿಷಯವಾಗಿ ಸಂಸದೆ ಸುಮಲತಾ ಅಂಬರೀಶ್‌ ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನಡುವೆ ಉಲ್ಬಣಿಸಿದ ಮಾತಿನ ಸಮರ ಈಗ ವೈಯಕ್ತಿಕ ಕೆಸರೆರಚಾಟಕ್ಕೆ ಬಂದು ನಿಂತಿದೆ.

ಮಾಜಿ ಪ್ರಧಾನಿ ಮಗನಾಗಿ ಮತ್ತು ಮಾಜಿ ಸಿಎಂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ಸಣ್ಣತನ ಅವರ ಮಾತಿನಲ್ಲೇ ಪುಷ್ಟೀಕರಿಸುತ್ತದೆ’ ಎಂದು ಸುಮಲತಾ ಅಂಬರೀಶ್‌ ಗುಡುಗಿದ್ದಾರೆ. ಭ್ರಷ್ಟಾಚಾರ ಇರುವ ಕಡೆ ಎಚ್‌.ಡಿ. ಕುಮಾರಸ್ವಾಮಿ ಪ್ರತ್ಯಕ್ಷರಾಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ದೇವೇಗೌಡರ ಪ್ರಬುದ್ಧ ರಾಜಕಾರಣಕ್ಕೆ ಹೋಲಿಸಿದ ಸುಮಲತಾ, ಪ್ರಜ್ವಲ್‌ ರೇವಣ್ಣ ಅವರನ್ನು ನೋಡಿ ಎಚ್‌ಡಿಕೆ ಕಲಿಯುವುದು ತುಂಬಾ ಇದೆ. ರಾಜ್ಯದಲ್ಲಿ ಜೆಡಿಎಸ್‌ ಉಳಿದರೆ ಅದು ಪ್ರಜ್ವಲ್‌ ಅವರಿಂದ ಮಾತ್ರ ಎಂದು ಹೇಳುವ ಮೂಲಕ ನಿಖಿಲ್‌ ಮತ್ತು ಎಚ್‌ಡಿಕೆ ಪಕ್ಷನಿಷ್ಠತೆ ಪ್ರಶ್ನಿಸಿದರು. ನಿಖಿಲ್‌ ಮತ್ತು ದೇವೇಗೌಡರು ಸೋತಿದ್ದು ಕುಮಾರಸ್ವಾಮಿ ಅವರ ವರ್ತನೆಯಿಂದಲೇ ಎಂದು ಆರೋಪಿಸಿದರು.

ಪ್ರಜ್ವಲ್‌ ರೇವಣ್ಣ ಅವರನ್ನು ಸಂಸತ್‌ನಲ್ಲಿ ಗಮನಿಸಿದ್ದೇನೆ. ಅಲ್ಲಿ ಮಾತನಾಡುವಾಗ ಅವರು ನಡೆದುಕೊಳ್ಳುವ ರೀತಿ, ಮಾತನಾಡುವುದು, ಗೌರವ ನೀಡುವುದನ್ನು ಗಮನಿಸಿದರೆ ಜೆಡಿಎಸ್‌ನಲ್ಲಿ ಒಂದು ಆಶಾಕಿರಣ ಇದೆ ಎನ್ನಿಸುತ್ತದೆ. ಕುಮಾರಸ್ವಾಮಿ ವಯಸ್ಸಿನಲ್ಲಿ ಆತನಿಗಿಂತ ದೊಡ್ಡವರಾಗಿದ್ದರೂ ಮಾತನಾಡುವುದನ್ನು ಕಲಿಯಬೇಕು. ತಪ್ಪುಗಳನ್ನು ತಿದ್ದಿಕೊಳ್ಳಲು ಚಿಕ್ಕವರಾದೇನು, ದೊಡ್ಡವರಾದೇನು? ಚಿಕ್ಕವರು ಹೇಳುವುದು ಸರಿ ಎನಿಸಿದರೆ ಅದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಸುಮಲತಾ ತೀಕ್ಷ್ಣವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com