ಆಪ್ತರಿಗೆ ಬಿಎಸ್ ವೈ ಭೋಜನ ಕೂಟ: ಶ್ರಾವಣದಲ್ಲಿ ಬೀಸಲಿದೆಯೇ ಬದಲಾವಣೆಯ ಗಾಳಿ? ಜುಲೈ 26ಕ್ಕೆ ರಾಜಿನಾಮೆ ನೀಡ್ತಾರಾ ಸಿಎಂ?

ಮುಖ್ಯಮಂತ್ರಿ ಯಡಿಯೂರಪ್ಪ ನವದೆಹಲಿಯಿಂದ ವಾಪಾಸಾದ ಎರಡು ದಿನಗಳ ನಂತರವೂ ನಾಯಕತ್ವ ಬದಲಾವಣೆಯ ಚರ್ಚೆ ಮುಂದುವರಿಯುತ್ತಲೇ ಇದೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನವದೆಹಲಿಯಿಂದ ವಾಪಾಸಾದ ಎರಡು ದಿನಗಳ ನಂತರವೂ ನಾಯಕತ್ವ ಬದಲಾವಣೆಯ ಚರ್ಚೆ ಮುಂದುವರಿಯುತ್ತಲೇ ಇದೆ. 

ದೆಹಲಿಯಲ್ಲಿ ನಡೆದ ಚರ್ಚೆಗಳು ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ, ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಕೆಲ ಸಚಿವರು ಹೇಳುತ್ತಿದ್ದಾರೆ, ಆದರೆ ಈ ತಿಂಗಳ ಅಂತ್ಯದಲ್ಲಿ ಅಥವಾ ಆಗಸ್ಟ್ ತಿಂಗಳಿನಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು ಎಂದು ಪಕ್ಷದೊಳಗಿನ ಕೆಲವರು ಹೇಳುತ್ತಿದ್ದಾರೆ.

ಜುಲೈ 26 ರಂದು ಯಡಿಯೂರಪ್ಪ ರಾಜಿನಾಮೆ ನೀಡಲಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಏನು ಬೇಕಾದರೂ ಆಗಬಹುದು, ನಾವು ಕಾಯುತ್ತಿದ್ದೇವೆ ಎಂದು ಯಡಿಯೂರಪ್ಪ ಸಂಪುಟದ ಸಚಿವರೊಬ್ಬರು ತಿಳಿಸಿದ್ದಾರೆ.

ಶನಿವಾರ ಯಡಿಯೂರಪ್ಪ ನಿಷ್ಠರೆಂದೇ ಗುರುತಿಸಿಕೊಂಡಿರುವ  ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ. ಸುಧಾಕರ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಶಾಸಕ ಸತೀಶ್ ರೆಡ್ಡಿ ಭಾಗಿಯಾಗಿದ್ದರು ಎಂಬ ಮಾಹಿತಿಯಿದೆ. ಎಲ್ಲರೊಂದಿಗೂ ದೆಹಲಿ ರಾಜಕೀಯ ಹಾಗೂ ಬೆಳವಣಿಗೆಗಳ ಕುರಿತು ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರ ಜೊತೆ ಯಾವುದೇ ಮಹತ್ವದ ವಿಷಯದ ಬಗ್ಗೆ ಚರ್ಚೆಯಾಗಿಲ್ಲ ಎಂದು ಭೋಜನಕೂಟದಲ್ಲಿ ಭಾಗಿಯಾಗಿದ್ದ ಸಚಿವರೊಬ್ಬರು ತಿಳಿಸಿದ್ದಾರೆ.

ಆದರೆ ದೆಹಲಿಯಿಂದ ಮರಳಿದ ನಂತರ ಸಿಎಂ ಯಡಿಯೂರಪ್ಪ ಅವರು ಒಕ್ಕಲಿಗ ನಿಗಮ ಸ್ಥಾಪಿಸುವುದರ ಜೊತೆಗೆ ಹಲವು ನಿಗಮ-ಮಂಡಳಿಗಳ ಅಧ್ಯಕ್ಷರ ಬದಲಾವಣೆ ಮಾಡಿದ್ದಾರೆ. ದೆಹಲಿ ನಾಯಕರು ಸಂಸತ್ತು ಅಧಿವೇಶನದಲ್ಲಿ ಬ್ಯುಸಿಯಾಗಿರುವ ಬೆನ್ನಲ್ಲೇ ಯಡಿಯೂರಪ್ಪ ಕಾರ್ಯವೈಖರಿ ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ.

ಅಸೆಂಬ್ಲಿಯನ್ನು ವಿಸರ್ಜಿಸಲು ಶಿಫಾರಸು ಮಾಡುವುದು ಯಡಿಯೂರಪ್ಪನ ಮುಂದೆ ಒಂದು ಆಯ್ಕೆಯಾಗಿರಬಹುದು, ಆದರೆ ಅದು ಸಂಭವಿಸುವ ಸಾಧ್ಯತೆಯಿಲ್ಲ. ಹಿರಿಯ ಮಂತ್ರಿಯೊಬ್ಬರು ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸ್ಸು ಮಾಡುವ ಕುರಿತು ಯಾವುದೇ ಚರ್ಚೆ ಅಥವಾ ಮಾತುಕತೆ ನಡೆದಿಲ್ಲ ಎಂದು ಹೇಳಿದರು.

ಯಾವುದೇ ಮಹತ್ತರವಾದ ಚರ್ಚೆ ನಡೆದಿಲ್ಲ, ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ, ಆದರೆ ಮೂಲಗಳ ಪ್ರಕಾರ ಇನ್ನೂ ಕೆಲವೇ ದಿನಗಳಲ್ಲಿ ಅಶೋಕ್ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಆದರೆ ಸದ್ಯ ಅಧಿವೇಶನ ನಡೆಯುತ್ತಿರುವುದರಿಂದ ಕೇಂದ್ರ ನಾಯಕರುಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ, ದೆಹಲಿಗೆ ಯಡಿಯೂರಪ್ಪ ಭೇಟಿ ನೀಡಿದ ವೇಳೆ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚಿಸಲಾಯಿತೆ ಎಂಬ ಬಗ್ಗೆ ಯಾವುದೇ ಸ್ಪಷ್ಚತೆಯಿಲ್ಲ, 

ಆದರೆ ಮೂಲಗಳ ಪ್ರಕಾರ ಯಡಿಯೂರಪ್ಪ ಅನುಭವಿಗಳಿಗಿಂತ ಹೊಸ ತಂಡದ ಮೇಲೆ ಹೆಚ್ಚು ವಿಶ್ವಾಸವಿರಿಸಿದ್ದಾರೆ ಎಂದು ಮತ್ತೊಬ್ಬ ಸಚಿವರು ತಿಳಿಸಿದ್ದಾರೆ.  ಯಡಿಯೂರಪ್ಪನನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ, ಅವರ ಸಾಮೂಹಿಕ ನಾಯಕತ್ವವನ್ನು ಯಾರೂ ಹೊಂದಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ನಡೆಡದ ಚರ್ಚೆ ಸಂಬಂಧ ಅವರು ತಮ್ಮ
ಅಭಿಪ್ರಾಯಗಳನ್ನು ಹಂಚಿಕೊಂಡಿಲ್ಲ ಎಂದು ಮತ್ತೊಬ್ಬ ಸಚಿವರು ಹೇಳಿದ್ದಾರೆ. ಆದರೆ ಇದೆಲ್ಲದರ ನಂತರವೂ ನಾಯಕತ್ವ ಬದಲಾವಣೆ ಚರ್ಚೆ ಇನ್ನೂ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com