ನಾಯಕತ್ವ ಬದಲಾವಣೆಯ ತೂಗುಗತ್ತಿ: ಬಾಂಬೆ ಫ್ರೆಂಡ್ಸ್ ಅತಂತ್ರ'ನ'ಸ್ಥಿತಿ; ಸಚಿವ ಸ್ಥಾನ ತಪ್ಪುವ ಭೀತಿ!

2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರಣರಾದ ಮೈತ್ರಿ ಸರ್ಕಾರದ 17 ಶಾಸಕರು ಸದ್ಯ ಆತಂಕದಲ್ಲಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಹಲವು ಗೊಂದಲಗಳನ್ನು ಸೃಷ್ಟಿಸಿದೆ. 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರಣರಾದ ಮೈತ್ರಿ ಸರ್ಕಾರದ 17 ಶಾಸಕರು ಸದ್ಯ ಆತಂಕದಲ್ಲಿದ್ದಾರೆ.

ಈ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದ್ದರು, ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ನೀಡಿದ್ದರು.

ಆದರೆ ಸದ್ಯ ನಡೆಯುತ್ತಿರುವ ಬೆಳವಣಿಗೆಗಳಿಂದ ಶಾಸಕರು ಆತಂಕಕ್ಕೀಡಾಗಿದ್ದಾರೆ, 17 ಶಾಸಕರಲ್ಲಿ 12 ಮಂದಿ ಸಚಿವರಾಗಿದ್ದಾರೆ. ಉಪ ಚುನಾವಣೆಯಲ್ಲಿ ಸೋಲನುಭವಿಸಿದ್ದ ಎಂಟಿಬಿ ನಾಗರಾಜ್ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ, ಪಕ್ಷದ ಹಲವು ನಿಷ್ಠಾವಂತರನ್ನು ಕಡೆಗಣಿಸಿ ವಲಸೆ ಬಂದವರಿಗೆ ಪ್ರಮುಖ ಹುದ್ದೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರ ಮೇಲೆ ಭರವಸೆ ಇಟ್ಟು ನಾವು ಪಕ್ಷ ತ್ಯಜಿಸಿದೆವು. ಒಂದು ವೇಳೆ ಯಡಿಯೂರಪ್ಪ ಅವರು ರಾಜಿನಾಮೆ ನೀಡಿದರೇ ಏನು ಮಾಡಬೇಕೆಂದು ನಮಗೆ ತಿಳಿಯುತ್ತಿಲ್ಲ,  ಹೀಗಾಗಿ ಯಡಿಯೂರಪ್ಪ ಅವರಿಗೆ ಅವಧಿ ಪೂರ್ಣಗೊಳಿಸಲು ಹೈಕಮಾಂಡ್ ಅವಕಾಶ ನೀಡಬೇಕು. ಪಕ್ಷ ನಮ್ಮ ಮೇಲೆ ವಿಶ್ವಾಸವಿರಿಸಿ ಜವಾಬ್ದಾರಿ ನೀಡಿದೆ, ನಾವು ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿದ್ದೇವೆ, ನಾವು ಪಕ್ಷದ ಕಾರ್ಯಕರ್ತರಾಗಿಯೂ ಕೆಲಸ ಮಾಡಲು ಸಿದ್ಧರಿದ್ದೇವೆ, ನಮ್ಮನ್ನು ಸಚಿವ ಸ್ಥಾನದಲ್ಲಿ ಅವರು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ವಲಸೆ ಕ್ಯಾಂಪ್ ನ ಸಚಿವರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಒಂದು ವೇಳೆ ಯಡಿಯೂರಪ್ಪ ರಾಜಿನಾಮೆ ನೀಡಿ ಹೊಸ ಸಿಎಂ ಬಂದರೆ ನಮ್ಮ ಖಾತೆಗಳು ಬದಲಾಗಬಹುದು ಎಂದು ಮತ್ತೊಬ್ಬ ಸಚಿವರು ಸಂಶಯ ವ್ಯಕ್ತಪಡಿಸಿದ್ದಾರೆ.  ಕೋವಿಡ್ ಸಂದರ್ಭದಲ್ಲಿ ನಾವು ಹಲವು ಸಮಾಜಮುಖಿ ಕೆಲಸ ಮಾಡಿದ್ದೇವೆ, ಇಂತಹ ಸಂದರ್ಭದಲ್ಲಿ ನಮ್ಮ ಖಾತೆಗಳನ್ನು ಬದಲಾವಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಯಡಿಯೂರಪ್ಪ ಅವರು ರಾಜಿನಾಮೆ ನೀಡಿದರೂ ಈ ಸಚಿವರುಗಳ ಖಾತೆ ಬದಲಾವಣೆ ಮಾಡುವುದಿಲ್ಲ, ಅವರು ಮಾಡಿರುವ ತ್ಯಾಗದ ಬಗ್ಗೆ ಪಕ್ಷಕ್ಕೆ ಅರಿವಿದೆ. ಸಚಿವರು ತಮ್ಮ ಖಾತೆಗಳಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com