2 ವರ್ಷಗಳ ಹಿಂದಿನ ಒಪ್ಪಂದದಂತೆ ಸಿಎಂ ರಾಜಿನಾಮೆ; ದಲಿತರನ್ನು ಸಿಎಂ ಮಾಡಿ ಎಂದು ಹೇಳಲು ಅವನ್ಯಾರು?: ಶ್ರೀನಿವಾಸ್ ಪ್ರಸಾದ್

ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಹೈಕಮಾಂಡ್‌ ನಡುವೆ ಆಗಿದ್ದ ಒಪ್ಪಂದದಂತೆ ಯಡಿಯೂರಪ್ಪ ಅವರು ಈಗ ನಡೆದುಕೊಳ್ಳುತ್ತಿದ್ದಾರೆ.
ಶ್ರೀನಿವಾಸ್ ಪ್ರಸಾದ್
ಶ್ರೀನಿವಾಸ್ ಪ್ರಸಾದ್

ಚಾಮರಾಜನಗರ: ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಹೈಕಮಾಂಡ್‌ ನಡುವೆ ಆಗಿದ್ದ ಒಪ್ಪಂದದಂತೆ ಯಡಿಯೂರಪ್ಪ ಅವರು ಈಗ ನಡೆದುಕೊಳ್ಳುತ್ತಿದ್ದಾರೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ಆದವರು ಮುಖ್ಯ ಹುದ್ದೆಗಳಲ್ಲಿ ಇರಬಾರದು ಎಂಬುದು ಪಕ್ಷದ ನಿಲುವು. ಹಾಗಿದ್ದರೂ ಸಮ್ಮಿಶ್ರ ಸರ್ಕಾರ ಪತನವಾದಾಗ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ವಯಸ್ಸಾಗಿದ್ದರೂ, ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಅವಕಾಶ ಕೊಡುವುದಾಗಿ ಹೈಕಮಾಂಡ್‌ ಹೇಳಿತ್ತು. ಅಂದು ನಡೆದ ಮಾತುಕತೆಯಂತೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದುವರೆಗೆ ಇದ್ದ ಊಹಾಪೋಹಕ್ಕೆ ಈಗ ತೆರೆ ಬಿದ್ದಿದೆ’ ಎಂದರು.

ಸ್ವಾಮೀಜಿಗಳು ಸೂಪರ್‌ ಹೈಕಮಾಂಡ್‌ಗಳಲ್ಲ. ಸ್ವಾಮೀಜಿಗಳು, ಹಿತೈಷಿಗಳು, ಬೆಂಬಲಿಗರು ಪಕ್ಷಕ್ಕೆ ಧಕ್ಕೆ ತರುವಂತೆ ಯಾರೂ ನಡೆದುಕೊಳ್ಳಬಾರದು, ಹೇಳಿಕೆ ನೀಡಬಾರದು ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿದ ಯಡಿಯೂರಪ್ಪ ಅವರನ್ನು ಹೈಕಮಾಂಡ್‌ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ’ ಎಂದರು.

ಬಿಜೆಪಿ ದಲಿತರನ್ನು ಸಿಎಂ ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರಲ್ಲಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್‌, ಅವನ್ಯಾರು ಹೇಳುವುದಕ್ಕೆ ಎಂದು ಏಕವಚನದಲ್ಲಿ ಪ್ರಶ್ನಿಸಿದರು. ‘ವಿರೋಧ ಪಕ್ಷದಲ್ಲಿರುವವರು ಈ ರೀತಿ ಹೇಳಿಕೆ ಕೊಡುವುದೇ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ‘ಮುಂದಿನ ಬಾರಿಗೆ ದಲಿತ ಮುಖ್ಯ‌ಮಂತ್ರಿಯನ್ನು ಮಾಡುತ್ತೇನೆ’ ಎಂದು ಹೇಳುತ್ತಿದ್ದರು. ಅದಾದ ಮೇಲೆ ಮಾತನ್ನು ಬದಲಾಯಿಸಿದರು ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com