ಕುತೂಹಲ ಮೂಡಿಸಿದ ಸಿದ್ದರಾಮಯ್ಯ- ಮಹಾದೇವಪ್ಪ ಭೇಟಿ: ಪರಿಶಿಷ್ಟ ಸಮುದಾಯ ಸಮಾವೇಶಕ್ಕೆ 'ಕೈ' ನಾಯಕರ ಸಿದ್ಧತೆ!

ಕಾಂಗ್ರೆಸ್ ನಲ್ಲಿ ಬಾವಿ ಮುಖ್ಯಮಂತ್ರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಮನೆಯಲ್ಲಿ ಶಾಸಕ ಜಿ.ಪರಮೇಶ್ವರ ಮತ್ತು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಸಭೆ ನಡೆಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ತುಮಕೂರು: ಕಾಂಗ್ರೆಸ್ ನಲ್ಲಿ ಭಾವಿ ಮುಖ್ಯಮಂತ್ರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಮನೆಯಲ್ಲಿ ಶಾಸಕ ಜಿ.ಪರಮೇಶ್ವರ ಮತ್ತು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಸಭೆ ನಡೆಸಿದ್ದಾರೆ.

ಮೂಲ ಕಾಂಗ್ರೆಸ್ ನಾಯಕರು ‘ಪರಿಶಿಷ್ಟ ಸಮುದಾಯಕ್ಕೆ ಸಿ.ಎಂ’ ಟ್ರಂಪ್ ಕಾರ್ಡ್ ಬಳಕೆಗೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಮುನಿಯಪ್ಪ, ಪರಮೇಶ್ವರ್ ಮತ್ತು ಹರಿಪ್ರಸಾದ್   ಮುಂದಿನ ವಿಧಾನಸಭೆ ಚುನಾವಣೆ ಒಳಗೆ ಪರಿಶಿಷ್ಟ ಸಮುದಾಯದ ಸಮಾವೇಶ ನಡೆಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನುಮತಿ ಕೇಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದರ ಜೊತೆಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಮನೆಗೆ ತೆರಳಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮಹಾದೇವಪ್ಪ ಮೂಲ ಜೆಡಿಎಸ್ ನವರು. ಸದ್ಯ ಪರಿಶಿಷ್ಟ ಸಮಾವೇಶಕ್ಕೂ ಮೊದಲು ಅಹಿಂದ ಸಮಾವೇಶ ನಡೆಸಲು ಯೋಜಿಸುತ್ತಿದ್ದಾರೆ.

2013 ರಲ್ಲಿ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಿ, ತಾವು ಕೇವಲ ಕುರುಬ ಸಮಾಜಕ್ಕೆ ಮಾತ್ರವಲ್ಲ, ಹಿಂದುಳಿದ ವರ್ಗಗಳ ಸಾಮೂಹಿಕ ನಾಯಕ ಎಂಬುದನ್ನು ಪ್ರತಿಪಾದಿಸಿದ್ದರು. ಅದಾದ ನಂತರ ಅಲ್ಪ ಸಂಖ್ಯಾತರು ಮತ್ತು ಪರಿಶಿಷ್ಟರು ಅವರನ್ನು ಬೆಂಬಲಿಸಿದ್ದರು.

ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋಲನುಭವಿಸಿದ ನಂತರ ಸಿದ್ದರಾಮಯ್ಯ ಸಿಎಂ ಆಗುವ ಮಾರ್ಗ ಮತ್ತಷ್ಟು ಸುಲಭವಾಯಿತು.  ಇನ್ನೂ ಪರಮೇಶ್ವರ್ ಕೂಡ  ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದಾರೆ.

ಹೋದಲೆಲ್ಲಾ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಅವರ ಬೆಂಬಲಿಗರು ಹೇಳುತ್ತಿದ್ದು, ಇದು ಮೂಲ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿದೆ,  ಇದನ್ನು ತಡೆಯಲು ಮೂಲ ಕಾಂಗ್ರೆಸ್ಸಿಗರೆಲ್ಲರೂ ಒಗ್ಗಟ್ಟಾಗಿದ್ದಾರೆ,  ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಸಭೆ ನಡೆದಿದ್ದು, ಪರಮೇಶ್ವರ್ ಕೂಡ ಭಾಗಿಯಾಗಿದ್ದರು.

ನಾವು ಕೇವಲ ಊಟಕ್ಕಾಗಿ ಜೊತೆ ಸೇರಿದ್ದೇವು, ಇದರ ಜೊತೆಗೆ ಪ್ರಸಕ್ತ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಚರ್ಚಿಸಿದೆವು ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಶೀಘ್ರದಲ್ಲೆ ಪರಮೇಶ್ವರ್ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com