ಹಾಸನ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಚನ್ನರಾಯಪಟ್ಟಣ ಎಪಿಎಂಸಿ ನಿರ್ದೇಶಕ, ಉದ್ಯಮಿ ಎಂ.ಶಂಕರ್ ಕಣಕ್ಕಿಳಿಯುವುದು ಖಚಿತವಾಗಿದೆ.
ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಶಂಕರ್ ಅವರ ಹೆಸರನ್ನು ದೆಹಲಿಯ ಎಐಸಿಸಿಗೆ ಕಳುಹಿಸಲಾಗಿದ್ದು, ಎರಡು, ಮೂರು ದಿನಗಳಲ್ಲಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ.
ಕಳೆದ ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಂ.ಎ.ಗೋಪಾಲಸ್ವಾಮಿ ಅವರು ಶ್ರವಣಬೆಳಗೊಳ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಹಾಗಾಗಿ ಈ ಬಾರಿ ಕಣಕ್ಕಿಳಿಯುವಂತೆ ವರಿಷ್ಠರು ನೀಡಿದ ಸೂಚನೆಯನ್ನು ನಿರಾಕರಿಸಿದ ಕಾರಣ ಶಂಕರ್ ಅವರಿಗೆ ಅದೃಷ್ಟ ಒಲಿದಿದೆ.
ಮೂರು ದಶಕಗಳಿಂದ ಪಕ್ಷದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ್ ಅವರು, ಹಿಂದೆ ಕಸಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ, ಜೆಡಿಎಸ್ನ ಸಿ.ಎನ್.ಬಾಲಕೃಷ್ಣ ವಿರುದ್ಧ ಪರಾಭವಗೊಂಡಿದ್ದರು. ಪತ್ನಿ ಮಂಜುಳಾ ಅವರು ಕಳೆದ ಬಾರಿ ಗೌಡಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಇನ್ನೂ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ಇನ್ನೂ ಮುಂದುವರಿದಿದೆ. ಜೆಡಿಎಸ್ ನಿಂದ ಭವಾನಿ ರೇವಣ್ಣ ಅಥವಾ ಸೂರಜ್ ರೇವಣ್ಣ ಕಣಕಿಳಿಯುವ ಸಾಧ್ಯತೆಯಿದೆ, ಬಿಜೆಪಿಯಿಂದ ನಗರಾಧ್ಯಕ್ಷ ಎಸ್ ಕೆ ವೇಣುಗೋಪಾಲ್, ಜಿಲಾಲ್ ಪ್ರದಾನ ಕಾರ್ಯದರ್ಶಿ ವಿಜಯ್ ವಿಕ್ರಂ ಮತ್ತು ಮಂಥರ್ ಗೌಡ ಹೆಸರು ಕೇಳಿ ಬರುತ್ತಿದೆ.
Advertisement