ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿಯ ಜೆಡಿಎಸ್ ಕಾರ್ಯಾಗಾರದಲ್ಲಿ ಸಹೋದರರಾದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು.
ನಾಲ್ಕು ದಿನಗಳ ಈ ವಿಶೇಷ ಕಾರ್ಯಾಗಾರದಲ್ಲಿ ಪಕ್ಷದ ನಾಯಕತ್ವ ಮತ್ತು ಯುವ ಪೀಳಿಗೆಯನ್ನು 2023ರ ಚುನಾವಣೆಗೆ ಸಿದ್ಧಗೊಳಿಸುವುದು ಪ್ರಮುಖ ಅಜೆಂಡಾವಾಗಿತ್ತು. ಒಂದೇ ವೇದಿಕೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಕಾಣಿಸಿಕೊಂಡರು, ಪಕ್ಷ ಸಂಘಟನೆ ಮಾಡುವ ಪಣ ತೊಟ್ಟರು.
ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಪಕ್ಷ ಸಂಘಟನೆ ಆರಂಭಿಸುವುದಾಗಿ ತಿಳಿಸಿದರು. ಕುಟುಂಬದ ಬಿರುಕುಗಳ ನಡುವೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಇಬ್ಬರು ಮೊಮ್ಮಕ್ಕಳನ್ನು ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರು ನಾಯಕರುಗಳಿಗೆ ಬೇಡಿಕೆಯಿದೆ, ಹೀಗಾಗಿ ಅಕ್ಟೋಬರ್ 30 ರಂದು ನಡೆಯುವ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಪ್ರಚಾರದಲ್ಲಿ ಇಬ್ಬರು ಭಾಗವಹಿಸುವ ಸಾಧ್ಯತೆಯಿದೆ ಎಂದು ಎಂಎಲ್ ಸಿ ತಿಪ್ಪೇಸ್ವಾಮಿ ಹೇಳಿದ್ದಾರೆ.
ಪ್ರಜ್ವಲ್ ಅವರು ಇತ್ತೀಚೆಗೆ ಸಿಂದನೂರಿನಲ್ಲಿ ನಡೆದ ಪಕ್ಷ ಸಂಘಟನೆಯಲ್ಲಿ ಪಾಲ್ಗೋಂಡು ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಹಳೇ ಮೈಸೂರು ಭಾಗದಲ್ಲಿ ಪ್ರಜ್ವಲ್ ಅವರನ್ನು ಒಪ್ಪಿಕೊಳ್ಳಬೇಕಾಗಿದೆ, ಪ್ರಜ್ವಲ್ ನೇರ ನುಡಿಯ ವ್ಯಕ್ತಿ ಹೀಗಾಗಿ, ಈ ಭಾಗದ ಒಕ್ಕಲಿಗ ಸಮುದಾಯ ಅವರನ್ನು ಸ್ವೀಕರಿಸಬೇಕಾಗಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಇಬ್ಬರು ಯುವ ನಾಯಕರನ್ನು ಪ್ರಮೋಟ್ ಮಾಡುವುದು ಪ್ರಾದೇಶಿಕ ಪಕ್ಷಕ್ಕೆ ಅನಿವಾರ್ಯವಾಗಿದೆ, ಈಗಾಗಲೇ ಬೇರೆ ಪಕ್ಷದಲ್ಲಿರುವ ಯುವ ನಾಯಕರು ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಸೂಚಿಸಿದಂತೆ ಪಕ್ಷವು ಶೇ .25 ರಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಪಕ್ಷ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
Advertisement