ಬರುತ್ತವೆ, ಹೋಗುತ್ತವೆ ಚುನಾವಣೆ, ಜೀವನದಲ್ಲಿ ಇಲ್ಲ ಬದಲಾವಣೆ: ಕೇಳೋರಿಲ್ಲ ಸಿಂದಗಿ ಜನರ ಬವಣೆ!
ಸಿಂದಗಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ದಯನೀಯ ಸ್ಥಿತಿಗೆ ವಸತಿ ಸಚಿವ ವಿ.ಸೋಮಣ್ಣ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published: 27th October 2021 12:27 PM | Last Updated: 27th October 2021 01:39 PM | A+A A-

ಸಿಂದಗಿಯಲ್ಲಿ ಸಿಎಂ ಪ್ರಚಾರ
ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ದಯನೀಯ ಸ್ಥಿತಿಗೆ ವಸತಿ ಸಚಿವ ವಿ.ಸೋಮಣ್ಣ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದಲ್ಲಿ ರಸ್ತೆಗಳಷ್ಟೇ ಅಲ್ಲ, ಸರಿಯಾದ ಕುಡಿಯುವ ನೀರು ಪೂರೈಕೆ, ಆರೋಗ್ಯ ಮತ್ತು ಸಾರಿಗೆ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಜನಪ್ರತಿನಿಧಿಗಳು ಪ್ರಚಾರದ ವೇಳೆ ಎಲ್ಲವನ್ನು ಸರಿಪಡಿಸುವ ಭರವಸೆ ನೀಡುತ್ತಾರೆ. ಆದರೆ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ಅಭಿವೃದ್ಧಿ ಮಾತಿರಲಿ, ಗ್ರಾಮಕ್ಕೆ ಮತ್ತೆ ಬರಲು ಹಿಂದೇಟು ಹಾಕುತ್ತಾರೆ, ಹಲವು ಕ್ಷೇತ್ರಗಳು ಅಭಿವೃದ್ಧಿ ಕಾಣುತ್ತಿರುವಾಗ ಸಿಂದಗಿ ಅದೇ ಸ್ಥಿತಿಯಲ್ಲಿರುವುದು ನಿರಾಶೆ ತಂದಿದೆ ಎಂದು ಬಾಳಗನೂರು ನಿವಾಸಿ ಮಂಜುನಾಥ್ ಪಾಟೀಲ್ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಜನರು ಉತ್ತಮ ಜೀವನೋಪಾಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಗೋವಾ, ಪುಣೆ ಮತ್ತು ಮುಂಬೈಗೆ ತೆರಳುತ್ತಿದ್ದಾರೆ. ರಾಜಕಾರಣಿಗಳ ಆಶ್ವಾಸನೆಗಳು ಕೇವಲ ಕಾಗದದಲ್ಲಿಯೇ ಉಳಿದಿವೆ' ಎಂದು ದೀಪಾವಳಿ ಆಚರಿಸಲು ತಮ್ಮ ಊರಿಗೆ ಮರಳಿರುವ ವಲಸೆ ಕಾರ್ಮಿಕ ಪ್ರಕಾಶ್ ನಾಯಕ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಂದಗಿ-ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ, ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣ
ಈ ಭಾಗಕ್ಕೆ ಒಂದೆರೆಡು ಏತ ನೀರಾವರಿ ಯೋಜನೆ ಘೋಷಣೆಯಾಗಿದ್ದರೂ ಕ್ಷೇತ್ರದ ಅರ್ಧದಷ್ಟು ಪ್ರದೇಶಗಳು ನೀರಾವರಿಗೆ ಒಳಪಡದೆ ರೈತರು ಮಳೆಯನ್ನೇ ಅವಲಂಬಿಸುವಂತಾಗಿದೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ಇಂಡಿ ಮತ್ತು ಕೋರವಾರ ಶಾಖಾ ಕಾಲುವೆ ಈ ಭಾಗದ ಮೂರು ಪ್ರಮುಖ ನೀರಾವರಿ ಯೋಜನೆಗಳಾಗಿವೆ.
ಮೂರೂ ಯೋಜನೆಗಳು ಜಾರಿಯಾದರೆ ಕ್ಷೇತ್ರದ ಶೇ 90ರಷ್ಟು ಭೂಮಿ ನೀರಾವರಿಗೆ ಒಳಪಡಲಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರ ಜೀವನೋಪಾಯವು ಕೃಷಿಯ ಮೇಲೆ ಅವಲಂಬಿತವಾಗಿರುವುದರಿಂದ ಈ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ಗೇಮ್ ಚೇಂಜರ್ ಆಗಲಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈ ಯೋಜನೆಗಳು ಜಾರಿಯಾಗಿಲ್ಲ, ಈ ಉಪಚುನಾವಣೆಯು ರೈತರ ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ನಾವು (ರೈತರು) ನಂಬಿದ್ದೇವೆ ಎಂದು ಕನ್ನೋಳಿ ಗ್ರಾಮದ ರಾಮನಗೌಡ ಬಿರಾದಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಸಿಂದಗಿ ಉಪಚುನಾವಣೆಯ ಸಾರ್ವಜನಿಕ ಪ್ರಚಾರಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಮೂರೂ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಬೆಂಬಲ ಕ್ರೋಢೀಕರಿಸಲು ಸಂಪೂರ್ಣ ಪ್ರಯತ್ನ ನಡೆಸುತ್ತಿವೆ. ಬಿಜೆಪಿಯ ರಮೇಶ್ ಭೂಸನೂರ ಎರಡು ಬಾರಿ (2008 ಮತ್ತು 2013) ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದಾಗ್ಯೂ, ಅವರು 2018 ರ ಚುನಾವಣೆಯಲ್ಲಿ ಎಂ ಸಿ ಮನಗೂಳಿ ವಿರುದ್ಧ ಸೋತರು. ಭೂಸನೂರ್ ಲಿಂಗಾಯತ-ಗಾಣಿಗ ಸಮುದಾಯದಿಂದ ಬಂದವರಾಗಿದ್ದು, ಅಲ್ಪಸಂಖ್ಯಾತ ಸಮುದಾಯದಲ್ಲಿ ಜನಪ್ರಿಯರಾಗಿದ್ದಾರೆ. ಅವರು ಎಲ್ಲಾ ಸಮುದಾಯಗಳು ಮತ್ತು ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ನ ಅಶೋಕ್ ಮನಗೂಳಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಲಿಂಗಾಯತ-ಪಂಚಮಸಾಲಿ ಸಮುದಾಯದಿಂದ ಬಂದವಾಗಿದ್ದಾರೆ, ತಂದೆ ದಿವಂಗತ ಎಂ ಸಿ ಮನಗೂಳಿ ಶಾಸಕರಾಗಿದ್ದಾಗ ಕ್ಷೇತ್ರವನ್ನು ನೋಡಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರೂ, ಅವರು ಕಾಂಗ್ರೆಸ್ಗೆ ತೆರಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಮುಖ ರಾಜಕೀಯ ಪಕ್ಷದಿಂದ ಸ್ಪರ್ಧಿಸಿದ ಮೊದಲ ಮಹಿಳೆ ಜೆಡಿಎಸ್ನ ನಾಜಿಯಾ ಶಕೀಲ್ ಅಹಮದ್ ಅಂಗಡಿ. ಐದು ದಶಕಗಳಿಂದ ಜನತಾ ಪಕ್ಷದೊಂದಿಗೆ ಅವರ ಮಾವ ಐ ಬಿ ಅಂಗಡಿ ಅವರ ಒಡನಾಟ ಹೊಂದಿದ್ದರು, ಇದನ್ನು ಪರಿಗಣಿಸಿ ಅವರಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಆಕಾಂಕ್ಷಿಯ ಅಲ್ಲದ ನಾಜಿಯಾರನ್ನು ಜೆಡಿಎಸ್ ಕಣಕ್ಕಿಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.