ಇಂಧನ ಬೆಲೆ ಹೆಚ್ಚಳ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ಹಮ್ಮಿಕೊಂಡಿದ್ದರು
ಇಂಧನ ಬೆಲೆ ಹೆಚ್ಚಳ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ಹಮ್ಮಿಕೊಂಡಿದ್ದರು

ವಿಧಾನಸಭೆ ಕಲಾಪ ವೇಳೆ ಜನಾರ್ದನ ಹೊಟೇಲ್ ಇಡ್ಲಿ-ದೋಸೆ ಬೆಲೆ ಬಿಸಿಬಿಸಿ ಚರ್ಚೆಗೆ ಗ್ರಾಸ

ನಗರದ ಖ್ಯಾತ ಜನಾರ್ದನ ಹೊಟೇಲ್ ನ ಮೃದು ಇಡ್ಲಿ, ಗರಿಗರಿಯಾದ ದೋಸೆ ನಿನ್ನೆ ನಡೆದ ವಿಧಾನಸಭೆ ಕಲಾಪದಲ್ಲಿ ಬಿಸಿಬಿಸಿ ಚರ್ಚೆಯಾಯಿತು. ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬಹಳ ಹೊರೆಯಾಗುತ್ತಿದೆ, ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ, ಹೊಟೇಲ್ ಗಳಲ್ಲಿ ಊಟ-ತಿಂಡಿ ಬೆಲೆ ಹೆಚ್ಚಾಗಿದೆ ಎಂಬ ವಿಷಯದ ಕುರಿತು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತಿರರು ಪ್ರಸ್ತಾ
Published on

ಬೆಂಗಳೂರು: ನಗರದ ಖ್ಯಾತ ಜನಾರ್ದನ ಹೊಟೇಲ್ ನ ಮೃದು ಇಡ್ಲಿ, ಗರಿಗರಿಯಾದ ದೋಸೆ ನಿನ್ನೆ ನಡೆದ ವಿಧಾನಸಭೆ ಕಲಾಪದಲ್ಲಿ ಬಿಸಿಬಿಸಿ ಚರ್ಚೆಯಾಯಿತು. ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬಹಳ ಹೊರೆಯಾಗುತ್ತಿದೆ, ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ, ಹೊಟೇಲ್ ಗಳಲ್ಲಿ ಊಟ-ತಿಂಡಿ ಬೆಲೆ ಹೆಚ್ಚಾಗಿದೆ ಎಂಬ ವಿಷಯದ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರರು ಪ್ರಸ್ತಾಪಿಸಿದರು.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜನಾರ್ದನ ಹೊಟೇಲ್ ಹಳೆಯ ಹೊಟೇಲ್ ಆಗಿದ್ದು ದಕ್ಷಿಣ ಭಾರತೀಯ ತಿನಿಸುಗಳಿಗೆ ಜನಪ್ರಿಯ. ಎಲ್ಲಾ ಪಕ್ಷಗಳ ರಾಜಕೀಯ ನಾಯಕರ ಫೇಮಸ್ ಅಡ್ಡಾ ಇದು. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ ಎಸ್ ಯಡಿಯೂರಪ್ಪ ಮೊದಲಾದವರು ಇಲ್ಲಿಗೆ ಆಗಾಗ ಬಂದು ದೋಸೆ, ಇಡ್ಲಿ ಇತ್ಯಾದಿ ತಿಂಡಿಗಳನ್ನು ಸವಿದು ಹೋಗುವುದುಂಟು.

ಸಿದ್ದರಾಮಯ್ಯನವರು ಹೇಳುವಂತೆ ಜನಾರ್ದನ ಹೊಟೇಲ್ ನಲ್ಲಿ ದೋಸೆ, ಇಡ್ಲಿ ಬೆಲೆ ಹೆಚ್ಚಾಗಲು ಇಂಧನ ಬೆಲೆ ಏರಿಕೆ ಕಾರಣ ಎಂಬುದು ಸರಿಯಾದ ವಾದವಲ್ಲ ಎಂದು ನಿನ್ನೆ ವಿಧಾನಸಭೆಯಲ್ಲಿ ಕಲಾಪ ಚರ್ಚೆಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ನಾನು ವಿವರಣೆ ಕೊಡುತ್ತೇನೆ ಎಂದು ಹೊಟೇಲ್ ನ ತಿಂಡಿಗಳ ಬೆಲೆಯ ಪಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ಸಿಎಂ ವಿವರಣೆ ನೀಡಿದರು. 2017ರಲ್ಲಿ ಮತ್ತು 2018ರಲ್ಲಿ ಒಂದು ಪ್ಲೇಟ್ ಇಡ್ಲಿಗೆ 35 ರೂಪಾಯಿ ಇತ್ತು. ಅದು 2019ರಲ್ಲಿ 1 ರೂಪಾಯಿ ಹೆಚ್ಚಳವಾಗಿದೆ. ಈಗ 2021ರಲ್ಲಿ 38 ರೂಪಾಯಿಯಾಗಿದೆ. ಕೇವಲ ಒಂದೆರಡು ರೂಪಾಯಿ ಹೆಚ್ಚಳವಾಗಿದೆಯಷ್ಟೆ. ಇದು ಸಹಜವಾಗಿದ್ದು ಇಂಧನ ಬೆಲೆ ಏರಿಕೆಯಿಂದ ಹೆಚ್ಚಾದ ದರ ಅಲ್ಲ ಇದು ಎಂದು ವಾದಿಸಿದರು. 

ಆಹಾರ ಧಾನ್ಯಗಳ ಸಾಗಾಟ ವೆಚ್ಚ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಹೊಟೇಲ್ ನಲ್ಲಿ ತಮ್ಮ ನೆಚ್ಚಿನ ತಿಂಡಿಯ ಬೆಲೆ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.ಅದಕ್ಕೆ ಇಂಧನ ಬೆಲೆ ಏರಿಕೆ ಕಾರಣ ಎಂದು ಪ್ರಸ್ತಾಪಿಸಿದರು. ಇಂದು ಕೂಡ ನಾನು ಜನಾರ್ದನ ಹೊಟೇಲ್ ಗೆ ಹೋಗಿ ಇಡ್ಲಿ-ದೋಸೆ ತಿಂದುಕೊಂಡು ಬಂದೆ ಎಂದರು.

ಅದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನನಗೆ ಕೂಡ ಜನಾರ್ದನ ಹೊಟೇಲ್ ನ ಇಡ್ಲಿ-ದೋಸೆ ಎಂದರೆ ಇಷ್ಟ. ಇದಕ್ಕೆ ಕೆರಳಿದ ಕಾಂಗ್ರೆಸ್ ನಾಯಕರು, ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು, ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಿಟ್ಟಿನಿಂದ ಕೆರಳಿದರು.ಅದಕ್ಕೆ ಸಿಎಂ ಬೊಮ್ಮಾಯಿ, ಮಸಾಲೆ ದೋಸೆ ಮತ್ತು ವಡಾದ ಬೆಲೆ ಸಹ ನನಗೆ ಗೊತ್ತಿದೆ. ಆದರೆ ನೀವು ನನ್ನ ಮಾತುಗಳನ್ನು ಕೇಳಲು ಸಿದ್ಧರಿಲ್ಲ ಎಂದರು.

ಇಡ್ಲಿ-ದೋಸೆಯ ರೇಟ್ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೂ ವಿರೋಧ ಪಕ್ಷದ ನಾಯಕರು ಕೇಳಿದ್ದಾರೆಂದು ಉತ್ತರಿಸುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಅದಕ್ಕೆ ಸಿದ್ದರಾಮಯ್ಯನವರು, ಮುಖ್ಯಮಂತ್ರಿಯಾಗಿ ನೀವು ಇಡ್ಲಿ-ದೋಸೆಯ ಬಗ್ಗೆ ಏಕೆ ಮಾತನಾಡುತ್ತೀರಿ, ಸಿಮೆಂಟ್, ಕಬ್ಬಿಣದ ಬೆಲೆ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಅದು ಜನಸಾಮಾನ್ಯರ ಕಿಸೆಗೆ ಹೊರೆಯಾಗಿಲ್ಲವೇ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com