

ಬಾಗಲಕೋಟೆ: ಬೆಳಗಾವಿಯ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಸುತ್ತಿರುವುದು ಸರಿಯಲ್ಲ. ಅವರಿಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ಪ್ರಶ್ನಿಸಿದ್ದಾರೆ.
ಇಂದು ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ‘ಅಂಬೇಡ್ಕರ್, ಗಾಂಧೀಜಿ ಅವರ ಭಾವಚಿತ್ರ ಅನಾವರಣ ಮಾಡಲಾಗುತ್ತಿದೆ ಎಂದಷ್ಟೇ ಸ್ಪೀಕರ್ ಕಚೇರಿಯಿಂದ ನಮಗೆ ಆಹ್ವಾನ ಬಂದಿದೆ. ಆದರೆ ಸಾವರ್ಕರ್ ಭಾವಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣ ಮಾಡಿದರೆ, ಕಾಂಗ್ರೆಸ್ ನಿಲುವನ್ನು ಅಲ್ಲಿಯೇ ಪ್ರಕಟಿಸಲಾಗುವುದು ಎಂದರು ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನು ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ‘ಸ್ವಾತಂತ್ರ್ಯ ಹೋರಾಟಗಾರರು ಯಾವ ರಾಜ್ಯದವರು ಎನ್ನುವುದು ಮುಖ್ಯವಲ್ಲ. ಸಾವರ್ಕರ್ ಗೆ ರಾಜ್ಯ ಮುಖ್ಯವಾಗುವುದಿಲ್ಲ. ಸೋನಿಯಾ ಗಾಂಧಿಗೂ, ಭಾರತಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.