ಕಲಬುರಗಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ನನ್ನನ್ನು ಸಿದ್ರಾಮುಲ್ಲಾಖಾನ್ ಎನ್ನುತ್ತಾನೆ. ನಾನು ಹಿಂದು. ತಂದೆ–ತಾಯಿ ನನಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟಿದ್ದಾರೆ. ನನಗೆ ಹೆಸರಿಡಲು ಇವನ್ಯಾವನು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ಭಾನುವಾರ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಭಾನುವಾರ ಶಾಸಕ ಎಂ.ವೈ. ಪಾಟೀಲ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ತಂದೆ-ತಾಯಿ ಕುರುಬರು. ನಾನೂ ಒಬ್ಬ ಕುರುಬ. ನನಗೆ ನನ್ನ ಧರ್ಮದ ಮೇಲೆ ಅಪಾರ ಗೌರವ ಇದೆ. ಆದರೆ ಅದನ್ನು ತೋರಿಕೆಗಾಗಿ ಹೇಳಿಕೊಳ್ಳುವ ಅಗತ್ಯ ಇಲ್ಲ. ಆದರೆ, ಸಿ.ಟಿ.ರವಿ ನನಗೆ ಸಿದ್ರಾಮುಲ್ಲಾ ಖಾನ್ ಎಂದು ಹೊಸ ನಾಮಕರಣ ಮಾಡುತ್ತಿದ್ದಾನೆ. ಇವನ್ಯಾರು ನನಗೆ ಹೀಗೆಲ್ಲಾ ಕರೆಯೋಕೆ? ಅವನೊಬ್ಬ ಮತಾಂಧ ಎಂದು ಕಿಡಿಕಾರಿದ್ದಾರೆ.
‘ನಮ್ಮ ಪ್ರಾಣ ಪಕ್ಷಿ ಹಾರಿ ಹೋಗುವಾಗ ವೈದ್ಯರಲ್ಲಿ ನಾವು ಬೇಡುವುದು ನಮ್ಮ ಪ್ರಾಣ ಉಳಿಸಿ ಎಂದೇ ಹೊರತು, ನಮ್ಮ ಜಾತಿಯವರದ್ದೇ ರಕ್ತ ಕೊಡಿ ಎಂದು ಕೇಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು ಅವರ ತೀರ್ಪು ಅಂತಿಮ’ ಎಂದರು.
ಮೊದಲು ನನ್ನ ಕಾಯಿಲೆ ವಾಸಿಯಾಗಲಿ ಅಂತ ಹೇಳುತ್ತೇವೆ. ಎಲ್ಲರ ಮೈಯಲ್ಲೂ ಹರಿಯುವುದು ಒಂದೇ ರಕ್ತ ಎಂದರು. ನಾನು ಬಿಜೆಪಿಗರ ಆರೋಪಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಜನರೇ ಅವರಿಗೆ ಈ ಬಾರಿ ಪಾಠ ಕಲಿಸುತ್ತಾರೆ. ನಮ್ಮ ಸಂವಿಧಾನದಲ್ಲಿ ಸರ್ವಧರ್ಮ ಸಮಾನತೆ ಇದೆ. ಅದನ್ನೇ ನಮ್ಮ ಕಾಂಗ್ರೆಸ್ ಪಕ್ಷದವರು ಅಳವಡಿಸಿಕೊಂಡಿದ್ದೇವೆ. ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದರು.
Advertisement