ಪ್ರಧಾನಿ ಮೋದಿಯವರ ಬೆಂಗಳೂರು ಭೇಟಿ: ಮೂವರು ಧಾರ್ಮಿಕ ಮುಖಂಡರುಗಳ ಭೇಟಿ, ಲೆಕ್ಕಚಾರಗಳೇನು?

ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಬೆಂಗಳೂರು ಭೇಟಿ ಸಹಜವಾಗಿ ಸಾಕಷ್ಟು ಕುತೂಹಲ, ಬಿಜೆಪಿ ಪಾಳಯದಲ್ಲಿ ಉತ್ಸಾಹ ತುಂಬಿದೆ. ಪ್ರಧಾನಿಯವರ ಈ ಭೇಟಿ ಕೇವಲ ಅಭಿವೃದ್ಧಿ ಅಜೆಂಡಾ ಮಾತ್ರವಲ್ಲ, ಪ್ರಮುಖ ಮೂರು ಧಾರ್ಮಿಕ ಮುಖಂಡರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಬೆಂಗಳೂರು ಭೇಟಿ ಸಹಜವಾಗಿ ಸಾಕಷ್ಟು ಕುತೂಹಲ, ಬಿಜೆಪಿ ಪಾಳಯದಲ್ಲಿ ಉತ್ಸಾಹ ತುಂಬಿದೆ. ಪ್ರಧಾನಿಯವರ ಈ ಭೇಟಿ ಕೇವಲ ಅಭಿವೃದ್ಧಿ ಅಜೆಂಡಾ ಮಾತ್ರವಲ್ಲ, ಪ್ರಮುಖ ಮೂರು ಧಾರ್ಮಿಕ ಮುಖಂಡರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.

ಸರ್ಕಾರದ ಕಾರ್ಯಕ್ರಮ ನಿಗದಿಯಾಗಿರುವ ಪ್ರಕಾರ, ಇಂದು ಪ್ರಧಾನಿಯವರು ವಿಧಾನಸೌಧ ಆವರಣದಲ್ಲಿ ಕುರುಬ ಸಮುದಾಯದ ಶ್ರೀ ನಿರಂಜನಾನಂದಪುರಿ ಸ್ವಾಮಿ ಮತ್ತು ಎಸ್ ಟಿ ನಾಯಕ ಸಮುದಾಯದ ಶ್ರೀ ಪ್ರಸನ್ನಾನಂದ ಸ್ವಾಮಿಗಳ ಸಮ್ಮಖದಲ್ಲಿ ಕನಕದಾಸ ಮತ್ತು ವಾಲ್ಮೀಕಿ ಸಂತರ ಪುತ್ಥಳಿಗಳಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಎಸ್ ಸಿ/ಎಸ್ ಟಿ ಸಮುದಾಯಕ್ಕೆ ಇತ್ತೀಚೆಗೆ ಮೀಸಲಾತಿ ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು ಇದೀಗ ಕೇಂದ್ರದ ಅಂಗಳದಲ್ಲಿ ಚೆಂಡು ಬಂದು ಬಿದ್ದಿದೆ.

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ ಮಾಡಲಿರುವ ಪ್ರಧಾನಿ ಮೋದಿಯವರು ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ಧಾರ್ಮಿಕ ಮುಖಂಡ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಒಕ್ಕಲಿಗ ಸಮುದಾಯದವರಿಗೆ ಶೇಕಡಾ 4ರಿಂದ ಮೀಸಲಾತಿಯನ್ನು ಶೇಕಡಾ 10ಕ್ಕೆ ಹೆಚ್ಚಳ ಮಾಡಬೇಕೆಂಬ ಮನವಿಯನ್ನು ಪ್ರಧಾನಿಯವರು ಪುರಸ್ಕರಿಸುತ್ತಾರೆಯೇ ಎಂದು ನೋಡಬೇಕಿದೆ.

ಹೈದರ್ ಆಲಿ ವಿರುದ್ಧ ಹೋರಾಡಿದ ವೀರ ವನಿತೆ ದಲಿತ ಯೋಧೆ ಒನಕೆ ಓಬವ್ವ ಪುತ್ಥಳಿಗೆ ಪ್ರಧಾನಿಯವರು ಪುಷ್ಪ ನಮನ ಸಲ್ಲಿಸಲಿದ್ದಾರೆ. ಓನಕೆ ಓಬವ್ವ 17ನೇ ಶತಮಾನದ ಮಧ್ಯಭಾಗದಲ್ಲಿ ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಿದ್ದ ಹೈದರ್ ಆಲಿ ಸೇನೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ್ದರು. ಬಿಜೆಪಿ ಸರ್ಕಾರ ಓಬವ್ವರನ್ನು ಹಿಂದೂ ಯೋಧೆ ಎಂದು ತೋರಿಸಿ ಅವರ ಜನ್ಮ ಜಯಂತಿಯನ್ನು ಆಚರಿಸಿದೆ.

ಇದೇ ವೇಳೆ, ಕೆಂಪೇಗೌಡ ಪ್ರತಿಮೆ ಅನಾವರಣವನ್ನು ಬಿಜೆಪಿ ಕಾರ್ಯಕ್ರಮವನ್ನಾಗಿ ಪರಿವರ್ತಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಸರ್ಕಾರ ಯತ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗೆ ಒಕ್ಕಲಿಗ ಮತಗಳು ಬರುತ್ತವೆ ಎಂದು ಅವರು ನಂಬಿದ್ದರೆ ಅದು ಅವರ ಭ್ರಮೆ. ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಯನ್ನು ಭ್ರಮನಿರಸನಗೊಳಿಸುತ್ತಾರೆ ಎಂದು ಅವರು ಹೇಳಿದ್ದಾರೆ. 

ರಾಜಕೀಯ ಲಾಭಕ್ಕಾಗಿ ಕೆಂಪೇಗೌಡರ ಚಿತ್ರವನ್ನು ಬಳಸುವುದು “ಕ್ಷಮಿಸಲಾಗದ ಕ್ರಮ” ಎಂದು ಹೇಳಿದ್ದಾರೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿನಾಶಕಾರಿ ಎಂದು ಸಾಬೀತುಪಡಿಸಿವೆ. ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಾವು ಕೆಂಪೇಗೌಡರನ್ನು ಗೌರವಿಸುತ್ತೇವೆ ಎಂದಿದ್ದಾರೆ. 

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ದುರ್ಬಲವಾಗಿರುವ ಓಕ್ಕಲಿಗ ಸಮುದಾಯವನ್ನು ಒಲಿಸಿಕೊಳ್ಳಲು ಮುಂದಾಗಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ಇಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಮೋಘ ಉಪಸ್ಥಿತಿಯಿಂದಾಗಿ ಜೆಡಿಎಸ್ ಇನ್ನೂ ಅಸ್ತಿತ್ವ ಉಳಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com