ಬೆಂಗಳೂರು: ದ್ವಾಪರಯುಗದಲ್ಲಿ ಸಮಾಜದ ಹಿತಕ್ಕಾಗಿ ಶ್ರೀರಾಮಚಂದ್ರ ನಿಂತ. ಕಲಿಯುಗದಲ್ಲಿ ಶ್ರೀರಾಮಚಂದ್ರನಂತೆ ಬೊಮ್ಮಾಯಿ ನಿಂತಿದ್ದಾರೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದಾರೆ.
ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬರಬೇಕು ಎಂದು ನಾನು ಅವತ್ತೇ ಹೇಳಿದ್ದೆ. ಮೀಸಲಾತಿ ಕೊಡಲು ನನ್ನ ಸರ್ಕಾರ ಬರಬೇಕು ಅಂದಿದ್ದೆ. ಅಂದು ನನ್ನ ಗೇಲಿ ಮಾಡಿದರು. ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ. ನಮ್ಮದು ನುಡಿದಂತೆ ನಡೆದ ಸರ್ಕಾರ. ವಾಲ್ಮೀಕಿ ಸಮುದಾಯ ಸೇರಿದಂತೆ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಇದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.
ಹಾಗೂ ಎಸ್ಟಿಯಲ್ಲಿ 151 ಜಾತಿಗಳು ಬರುತ್ತವೆ. ಮೀಸಲಾತಿ ಹೆಚ್ಚಿಸುವ ಕುರಿತ ಹೋರಾಟ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಹಿಂದಿನ ಸರ್ಕಾರಗಳು ಕ್ರಮ ಕೈಗೊಂಡಿರಲಿಲ್ಲ. ಇದೀಗ ನಮ್ಮ ಸರ್ಕಾರ ಎಸ್ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ, ಎಸ್ಟಿ ಮೀಸಲಾತಿ ಶೇ.3ರಿಂದ 7ಕ್ಕೆ ಹೆಚ್ಚಳ ಮಾಡಿದೆ. ಶ್ರೀರಾಮುಲು ಕೇವಲ ಮಾತನಾಡುತ್ತಾರೆ, ಕೆಲಸ ಮಾಡಲ್ಲ ಎಂದು ಗೇಲಿ ಮಾಡಿದವರಿಗೆ, ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಹೀಯಾಳಿಸುತ್ತಿದ್ದವರಿಗೆ ಇಂದು ಉತ್ತರ ದೊರೆತಿದೆ ಎಂದು ಹೇಳಿದರು.
ಇದನ್ನೂ ಓದಿ: ಎಸ್.ಸಿ, ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅನುಮೋದನೆ
ಸರ್ಕಾರ 101 ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಗಳು ಮತ್ತು ಐದು ಮೆಗಾ ಹಾಸ್ಟೆಲ್ಗಳನ್ನು ನಿರ್ಮಿಸುತ್ತಿದೆ. ಎಸ್ಸಿ/ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ 28,000 ಕೋಟಿ, ಅನುದಾನ ಮೀಸಲಿಟ್ಟಿದೆ. ಎಸ್ಸಿ/ಎಸ್ಟಿ ಇಲಾಖೆಗಳಿಗೆ 6,000 ಕೋಟಿ, ಸಮುದಾಯದವರಿಗೆ ನಿವೇಶನ ಖರೀದಿಸಲು 20 ಲಕ್ಷ, ಮನೆ ಕಟ್ಟಲು 2 ಲಕ್ಷ, ಪ್ರತಿ ಕುಟುಂಬಕ್ಕೆ 75 ಯೂನಿಟ್ ವಿದ್ಯುತ್ ಉಚಿತ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 100 ಯುವಕರನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡಲು 10 ಲಕ್ಷ ರೂ. ನೀಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸುಗಳನ್ನು ಈಡೇರಿಸುತ್ತಿದ್ದೇವೆ ಎಂದಿದ್ದಾರೆ.
Advertisement