ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಶೋಭಾ, ಲಿಂಬಾವಳಿ ಹೆಸರಿಗೆ ಬಿಎಸ್ ವೈ ಸಮ್ಮತಿ: ಸಿಟಿ ರವಿ ನೇಮಕಕ್ಕೆ ಸಂತೋಷ್ ಬೆಂಬಲಿಗರ ವಿರೋಧ!

ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ ಸಂಭ್ರಮಾಚರಣೆ  ನಡೆಯಿತು. ಇದು ಅವರ ಅವಧಿಯ ಅಂತ್ಯವಾಗಬಹುದಾದರೂ ಎಂದು ಹೇಳಲಾಗುತ್ತಿದೆ.
ಬಿಎಸ್ ಯಡಿಯಬರಪ್ಪ ಮತ್ತು ಬಿಎಲ್ ಸಂತೋಷ್
ಬಿಎಸ್ ಯಡಿಯಬರಪ್ಪ ಮತ್ತು ಬಿಎಲ್ ಸಂತೋಷ್
Updated on

ಬೆಂಗಳೂರು: ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ ಸಂಭ್ರಮಾಚರಣೆ  ನಡೆಯಿತು. ಇದು ಅವರ ಅವಧಿಯ ಅಂತ್ಯವಾಗಬಹುದಾದರೂ ಎಂದು ಹೇಳಲಾಗುತ್ತಿದೆ.

ಆದರೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಅನುಯಾಯಿಗಳು ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವವರೆಗೆ  ನಳಿನ್ ಕುಮಾರ್ ಕಟೀಲ್ ಅಧಿಕಾರ ಅವಧಿ ವಿಸ್ತರಣೆಗೆ ಒತ್ತಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಳಿನ್ ಕುಮಾರ್ ಕಟೀಲು ಅವರು 21 ಬಾರಿ ರಾಜ್ಯ ಪ್ರವಾಸ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಚುನಾವಣಾ ವರ್ಷದಲ್ಲಿ ಅವರನ್ನು ಏಕೆ ಬದಲಾಯಿಸಬೇಕು? ಅವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಅರನ್ನು ಪಕ್ಷದ ಅಧ್ಯಕ್ಷರನ್ನಾಗಿ ಉಳಿಸಿಕೊಳ್ಳಬೇಕು. ಮೂರು ಬ್ಯಾಕ್ ಟು ಬ್ಯಾಕ್ ಗೆಲುವಿನೊಂದಿಗೆ ಅವರನ್ನು ಹ್ಯಾಟ್ರಿಕ್ ಹೀರೋ ಎಂದು ಪ್ರಶಂಸಿಸಬೇಕು ಎಂದು ಬಿಜೆಪಿ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಭಾನುವಾರ ನೀಡಿರುವ ಪತ್ರಿಕೆ ಜಾಹೀರಾತಿನಲ್ಲಿ ಪ್ರಮುಖ ನಾಯಕರ ಸಂದೇಶಗಳಿದ್ದರೆ, ಪಕ್ಷದ ಸಂಸದೀಯ ಮಂಡಳಿಯ ಸದಸ್ಯ ಬಿಎಸ್ ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು  ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯಡಿಯೂರಪ್ಪ ಅವರು ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಯಸುತ್ತಾರೆ.

2018ರ ವಿಧಾನಸಭೆಯಲ್ಲಿ ಬಿಜೆಪಿ ಸೋತ 30 ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳ ಪ್ರವಾಸ ಮಾಡದಂತೆ ಯಡಿಯೂರಪ್ಪ ಅವರನ್ನು ತಡೆಯಲು ಒಂದು ಬಣ ಶ್ರಮಿಸುತ್ತಿದೆ. ಆದರೆ ತಾವು ರಾಜ್ಯ ಪ್ರವಾಸ ಮಾಡುವುದಾಗಿ ದೆಹಲಿ ಪ್ರವಾಸದ ವೇಳೆ ಹೇಳಿದ್ದಾರೆ.

ಇದೇ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಪರಿಶಿಷ್ಟ ಜಾತಿಯ ಅರವಿಂದ ಲಿಂಬಾವಳಿ, ಒಕ್ಕಲಿಗ ನಾಯಕ  ಸಿ.ಟಿ.ರವಿ ಹೆಸರು ಕೇಳಿಬರುತ್ತಿದೆ. ಮೊದಲೆರಡು ಹೆಸರು ಯಡಿಯೂರಪ್ಪ ಗುಂಪಿಗೆ ಸ್ವೀಕಾರಾರ್ಹ ಎಂದು ಹೇಳಲಾಗಿದ್ದರೂ, ಸಿಟಿ ರವಿ ಅವರ ಉಮೇದುವಾರಿಕೆಯನ್ನು ಸಂತೋಷ್ ಪಾಳಯ ತಳ್ಳಿ ಹಾಕುತ್ತಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ಲಿಂಗಾಯತರಾದ ತಮ್ಮ ಆಪ್ತ ಬಸವರಾಜ ಬೊಮ್ಮಾಯಿ ಅವರಿಗೆ  ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದರು. ಹೀಗಾಗಿ ಪಕ್ಷದ ಅಧ್ಯಕ್ಷರ ನೇಮಕದಲ್ಲೂ ಯಡಿಯೂರಪ್ಪ ಅವರ ಮಾತು ಫೈನಲ್ ಎಂದು ಪಕ್ಷದೊಳಗಿನ ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಹೇಳಿದ ಹಾಗೆ ಹೈಕಮಾಂಡ್ ನಡೆದರೇ  ಪಕ್ಷದಲ್ಲಿ  ಅಗ್ರಗಣ್ಯವಾಗಿ ಬಿಎಸ್ ವೈ ಹೊರಹೊಮ್ಮುತ್ತಾರೆ.

ಪಕ್ಷದ ಅಲಿಖಿತ ನಿಯಮಗಳ ಪ್ರಕಾರ, ಯಡಿಯೂರಪ್ಪ ಅವರು ಪಕ್ಷದ ಮಾರ್ಗದರ್ಶಕ ಮಂಡಲದಲ್ಲಿರಬೇಕು. ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಆದರೆ ಈ ಹುದ್ದೆಯಲ್ಲಿ ನಿಜವಾಗಿ ಅಧಿಕಾರ ಇರುವುದು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಬೇಕೆಂದು ಹೈಕಮಾಂಡ್ ಬಯಸಿದರೇ ಅವರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಬಿಎಸ್ ವೈ ಬೆಂಬಲಿಗರ ಅಭಿಪ್ರಾಯವಾಗಿದೆ. ಗಣೇಶ ಚತುರ್ಥಿ ನಂತರ ಪಕ್ಷದ ಅಧ್ಯಕ್ಷ ಹುದ್ದೆ ಗೆ ನೂತನ ಹೆಸರು ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com