ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮನ್ನು ಶೀಘ್ರದಲ್ಲಿಯೇ ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಶ್ವರಪ್ಪ, ನನಗಷ್ಟೇ ಅಲ್ಲ ರಮೇಶ್ ಜಾರಕಿಹೊಳಿಗೂ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಅವರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು. ನಾನು ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇನೆ.
ಕೆಲವು ತಿಂಗಳ ಹಿಂದೆ ನನ್ನ ಮೇಲೆ ನಿರಾಧಾರ ಆರೋಪ (ಗುತ್ತಿಗೆದಾರ ಸಂತೋಷ್ ಪಾಟೀಲ್ ಕೇಸ್) ಕೇಳಿ ಬಂದ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್ ಅವರ ಮೇಲೆಯೂ ಇಂತದ್ದೇ ಒಂದು ಆರೋಪ (ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್) ಕೇಳಿ ಬಂದಿತ್ತು.
ಅದೇ ರೀತಿ ನನ್ನನ್ನು ಪರಿಗಣಿಸುವಂತೆ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ನನಗೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಕಳೆದ ನಾಲ್ಕು ತಿಂಗಳಿನಿಂದ ಖಾಸಗಿಯಾಗಿ ಸಿಎಂ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಆದರೆ ಇದುವರೆಗೂ ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ನಿನ್ನೆ ಬೆಳಗಾವಿಗೆ ಹೋದಾಗ ಅಧಿವೇಶನಕ್ಕೆ ಹಾಜರಾಗಲ್ಲ ಎಂದು ಸ್ಪೀಕರ್ ಅವರಿಗೆ ಹೇಳಿ ಬಂದಿದ್ದೇನೆ.
ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿದರೂ ಸಂಪುಟದಲ್ಲಿ ಸ್ಥಾನ ನಿರಾಕರಿಸಲಾಗಿದೆ ಎಂಬುದು ಅವರ ಕೊರಗು. ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜತೆ ಸಿಎಂ ಚರ್ಚೆ ನಡೆಸಿದ್ದಾರೆ. ಸಿಎಂ ಮಾತಿನ ಮೇಲೆ ನನಗೆ ನಂಬಿಕೆ ಇದೆ. ಇಂದು ಸಂಜೆ ಸಿಎಂ ಬೊಮ್ಮಾಯಿ ಜತೆ ಮಾತನಾಡುವೆ. ಸದನ ಕಲಾಪಕ್ಕೆ ಹಾಜರಾಗುವ ಬಗ್ಗೆ ನಾಳೆ ನಿರ್ಧರಿಸುವೆ. ಕ್ಲೀನ್ ಚಿಟ್ ಪಡೆದಿರೋ ನನ್ನನ್ನು ಮತ್ತೆ ಮಂತ್ರಿ ಮಾಡಲಿ, ನಮ್ಮ ಪಕ್ಷದ ನಾಯಕರು ಮಾತು ಉಳಿಸಿಕೊಳ್ಳಲಿ ಎಂದಿದ್ಧಾರೆ.
ನಾನು 30 ರಿಂದ 40 ವರ್ಷಗಳಿಂದ ಪ್ರತಿಭಟನೆ ಮೂಲಕ ರಾಜಕಾರಣದಲ್ಲಿ ಬಂದವರು. ಕ್ಲೀನ್ ಚಿಟ್ ಸಿಕ್ಕ ಬಳಿಕವೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ. ಆದ್ರೆ ನಮ್ಮನ್ನು ಯಾಕೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ನಾಡಿನ ಜನತೆ ಫೋನ್ ಮಾಡಿ ಕೇಳುತ್ತಿದ್ದರು. ಆದರೆ ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ಆದ್ರೆ ಇದೀಗ ಸಿಎಂ ಬೊಮ್ಮಾಯಿ ಅವರ ಮಾತುಗಳಿಂದ ನಮಗೆ ನಂಬಿಕೆ ಬಂದಿದೆ ಎಂದು ಹೇಳಿದರು.
ನಮ್ಮ ಮೇಲೆ ಆರೋಪಗಳು ಕೇಳಿ ಬಂದ ಹಿನ್ನೆಲೆ ರಾಜೀನಾಮೆ ನೀಡಿದ್ದೇವೆ. ಈಗ ಆರೋಪ ಮುಕ್ತವಾಗಿ ಬಂದಿದ್ದೇವೆ. ಹಾಗಾಗಿ ನಮ್ಮನ್ನು ಸೇರಿಸಿಕೊಳ್ಳಿ. ಬೇರೆ ಯಾರಿಗೆಲ್ಲಾ ಅವಕಾಶ ನೀಡುತ್ತಾರೆ ಎಂಬುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.
Advertisement