ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಜೆಡಿಎಸ್ ಗೆ ವರವಾಗುತ್ತಿದೆ 'ಕೈ' ನಾಯಕ ಕೆಎನ್ ರಾಜಣ್ಣ ಹೇಳಿಕೆ!

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಕುರಿತು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ ನಂತರ ಭುಗಿಲೆದ್ದಿರುವ ವಿವಾದ ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ನಾಯಕರಿಗೆ ಸಹಕಾರಿಯಾಗುತ್ತಿದೆ.
ಕೆಎನ್ ರಾಜಣ್ಣ
ಕೆಎನ್ ರಾಜಣ್ಣ

ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಕುರಿತು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ ನಂತರ ಭುಗಿಲೆದ್ದಿರುವ ವಿವಾದ ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ನಾಯಕರಿಗೆ ಸಹಕಾರಿಯಾಗುತ್ತಿದೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ರಾಜಣ್ಣ ಅವರಿಗೆ ಟಿಕೆಟ್ ನಿರಾಕರಿಸುವಂತೆ ಒಕ್ಕಲಿಗ ಸಮುದಾಯದ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿವೆ ಎಂದು ಮೂಲಗಳು ತಿಳಿಸಿವೆ.

ರಾಜಣ್ಣನವರ ಹೇಳಿಕೆಯಿಂದ ಸಮುದಾಯದವರ ಭಾವನೆಗೆ ಧಕ್ಕೆಯುಂಟಾಗಿದೆ, ಇದರ ಜೊತೆಗೆ ಜೆಡಿಎಸ್ ಕಡೆ ಸಮುದಾಯದ ಒಲವು ಹೆಚ್ಚಾಗಿರುವುದು ಕಾಂಗ್ರೆಸ್ ಗೆ ಆತಂಕ ಮೂಡಿಸಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಜೆಡಿಎಸ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದೆ, ಇನ್ನಷ್ಟು ಸಂಘಟಿಸುವ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಶಫಿ ಅಹಮದ್ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ಎಸ್‌ಟಿ ನಾಯಕರಾಗಿದ್ದ ರಾಜಣ್ಣ ಅವರು 1989ರಲ್ಲಿ ಮೊದಲ ಬಾರಿಗೆ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಸಹಾಯ ಮಾಡಿದ್ದರು. ನಂತರ ಜೆಡಿಎಸ್‌ ಸೇರಿದರು. 2004 ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜಣ್ಣ ಪರ ದೇವೇಗೌಡರು ಪ್ರಚಾರ ನಡೆಸಿದ್ದರಿಂದ ಗೆಲುವು ಸಾಧಿಸಿದ್ದರು.ಆದರೆ 2008 ರಲ್ಲಿ ತಮ್ಮ ನಿಷ್ಠೆಯನ್ನು ಮತ್ತೆ  ಕಾಂಗ್ರೆಸ್‌ಗೆ ಬದಲಾಯಿಸಿದರೂ ಪ್ರಯೋಜನವಾಗದೇ ಎರಡು ಬಾರಿ ಮಧುಗಿರಿಯಲ್ಲಿ ಸೋತರು.

ಶೃಂಗೇರಿ ಶಾರದಾ ಪೀಠದ ಸ್ವಾಮೀಜಿ ಅವರನ್ನು ಭಾನುವಾರ ತಮ್ಮ ಮನೆಯಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜಣ್ಣ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ,ರಾಜಣ್ಣ ಅವರು ಕ್ಷಮೆಯಾಚಿಸಬೇಕು ಎಂದು ಸೂಚಿಸಿದ್ದೇವೆ, ಅದರಂತೆ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ, ಅದನ್ನು ಅಲ್ಲಿಗೆ ಬಿಡೋಣ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com