ಮುಖ್ಯಮಂತ್ರಿ ಹುದ್ದೆ ಬೇಡ ಎನ್ನೋದಕ್ಕೆ ನಾನೇನು ಕಾವಿ ಹಾಕಿಲ್ಲ, ಖಾದಿ ಬಟ್ಟೆ ಹಾಕಿದ್ದೇನೆ: 'ಸಿದ್ದು' ಗೆ ಡಿಕೆಶಿ ಗುದ್ದು!

ಮುಖ್ಯಮಂತ್ರಿ ಹುದ್ದೆ ಬೇಡ ಎಂದು ಹೇಳಲು ನಾನೇನು ಸನ್ಯಾಸಿನಾ, ಕಾವಿ ಬಟ್ಟೆ ಹಾಕಿಲ್ಲ, ಖಾದಿ ಬಟ್ಟೆ ಹಾಕಿದ್ದೇನೆ. ಎಸ್.ಎಂ ಕೃಷ್ಣ ಅವರ ನಂತರ ಸಮುದಾಯದಲ್ಲಿ ನಾನು ಒಂದು ಹಂತಕ್ಕೆ ಬಂದಿದ್ದೇನೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಮೈಸೂರು: ಮುಖ್ಯಮಂತ್ರಿ ಹುದ್ದೆ ಬೇಡ ಎಂದು ಹೇಳಲು ನಾನೇನು ಸನ್ಯಾಸಿನಾ, ಕಾವಿ ಬಟ್ಟೆ ಹಾಕಿಲ್ಲ, ಖಾದಿ ಬಟ್ಟೆ ಹಾಕಿದ್ದೇನೆ. ಎಸ್.ಎಂ ಕೃಷ್ಣ ಅವರ ನಂತರ ಸಮುದಾಯದಲ್ಲಿ ನಾನು ಒಂದು ಹಂತಕ್ಕೆ ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ ಶಿವಕುಮಾರ್ ಬಣ ಎಂಬುದು ಇಲ್ಲ. ಇರುವುದು ಕಾಂಗ್ರೆಸ್ ಬಣ ಮಾತ್ರ. ಮತ್ಯಾವುದೇ ಬಣ ಇಲ್ಲ. ಎಸ್.ಎಂ ಕೃಷ್ಣ ನಂತರ ಒಕ್ಕಲಿಗ ಸಮುದಾಯದಿಂದ ಒಂದು ಹಂತಕ್ಕೆ ಬಂದಿದ್ದೇನೆ. ಹಾಗಾಗಿ ಈ ಬಾರಿ ನನ್ನ ಕೈ ಬಲಪಡಿಸಿ ಎಂದು ಬೆಂಗಳೂರಿನ ಕಾರ್ಯಕ್ರಮದಲ್ಲಿ ಹೇಳಿದ್ದೇನೆ. ಜೊತೆಗೆ ಎಲ್ಲಾ ಸಮುದಾಯದ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ನೀವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್​ ನಾನೇನು ಸನ್ಯಾಸಿಯೇ, ನಾನು ಕಾವಿ ಬಟ್ಟೆ ಧರಿಸಿದ್ದೇನಾ, ನಾನು ಖಾದಿ ಬಟ್ಟೆ ತೊಟ್ಟಿದ್ದೇನೆ. ಮೊದಲು ಕಾಂಗ್ರೆಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು. ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಾನು ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಸಿದ್ದರಾಮೋತ್ಸವದಲ್ಲಿ ಭಾಗವಹಿಸುತ್ತೇವೆ. ಸಿದ್ದರಾಮಯ್ಯ ಅವರ 75 ನೇ ವರ್ಷದ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ನಾನು ಸರಳವಾಗಿ ಆಚರಿಸಿಕೊಂಡೆ. ಅದು ನನ್ನ ವಿಚಾರ, ಕೆಲವರು ಅದ್ಧೂರಿಯಾಗಿ ಆಚರಿಸುತ್ತಾರೆ ಎಂದರು.

ಇದು ಕುವೆಂಪು, ಬಸವಣ್ಣ, ಕನಕದಾಸರು, ಶಿಶುನಾಳ ಷರೀಫ್ ಅವರ ಕರ್ನಾಟಕ ಇದು. ಈ ನಾಡಿನ ಶಾಂತಿಯನ್ನು ಬಿಜೆಪಿ ಸರಕಾರ ಕೆಡಿಸುತ್ತಿದೆ. ಅನೇಕರ ವ್ಯಾಪಾರ ವಹಿವಾಟನ್ನು ಬಿಜೆಪಿ ಹಾಳು ಮಾಡಿದೆ. ಎಲ್ಲಾ ನೇಮಕಾತಿಗೂ ಬೆಲೆ ನಿಗದಿ ಮಾಡಿದ್ದಾರೆ. ಹೋಟೆಲ್ ನಲ್ಲಿ ತಿಂಡಿಗೆ ಬೆಲೆ ನಿಗದಿ ಮಾಡಿದ ರೀತಿ ಬೆಲೆ ಪಟ್ಟಿ ಹಾಕಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಆಗಿರೋ ಅಕ್ರಮ ಈ ದೇಶದಲ್ಲಿ ಎಲ್ಲೂ ಕೂಡ ನಡೆದಿಲ್ಲ. ಓಎಂಆರ್ ಶೀಟ್ ಅನ್ನೇ ತಿದ್ದುತ್ತಾರೆ ಅಂದರೆ ಎಂತಹ ಸ್ಥಿತಿ ಇದೆ ನೋಡಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com