ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರಕ್ಕೇರಲು ಹರಸಾಹಸ ಮಾಡುತ್ತಿದ್ದಾರೆ, ಜೊತೆಗೆ ಸಮಾಜವಾದಿಗಳಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮೋತ್ಸವ ಕೊನೆಯ ನಾಟಕ, ಮುಂದಿನ ಚುನಾವಣೆಗೆ ಇದು ಕಸರತ್ತು. ಈ ಉತ್ಸವ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಸ್ಗಳೇನೇನಾಗುತ್ತೆ ನೋಡುತ್ತಾ ಇರಿ. ಹುಟ್ಟುಹಬ್ಬವನ್ನು ಅಷ್ಟು ಅದ್ಧೂರಿಯಾಗಿ ಆಚರಿಸುವ ಅವಶ್ಯಕತೆ ಏನಿದೆ, ಅಭಿಮಾನಿಗಳ ಹೆಸರಿನಲ್ಲಿ ಮೈಲೇಜ್ ಪಡೆಯಲು ಯತ್ನಿಸುತ್ತಿರುವ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ 75 ಕೋಟಿ ಹಣ ಖರ್ಚು ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಕುವೆಂಪು ಅವರ ಮಾರ್ಗದಲ್ಲಿ ನಡಯುವುದಾಗಿ ಹೇಳುವ ಡಿಕೆ ಶಿವಕುಮಾರ್, ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಬದಲು, ನಿರ್ದಿಷ್ಟ ಸಮುದಾಯದವರಿಗಾಗಿ ಕಾರ್ಯಕ್ರಮ ಆಯೋಜಿಸುತ್ತಾರೆ ಎಂದು ಈಶ್ವರಪ್ಪ ವ್ಯಂಗ್ಯ ಮಾಡಿದರು.
ಸಿದ್ದರಾಮೋತ್ಸವ ಮಾಡಿ ಕಾಂಗ್ರೆಸ್ ವ್ಯಕ್ತಿ ಪೂಜೆ ಶುರುಮಾಡಿದೆ ಎಂದು ನನಗೆ ಪ್ರಶ್ನೆ ಕೇಳೋದಕ್ಕಿಂತಾ ಸಿದ್ದರಾಮಯ್ಯ ಅವರನ್ನೇ ಕೇಳೋದು ಒಳಿತು. ತಾನು ಸಮಾಜವಾದಿ, ತುಂಬಾ ಸರಳ, ವೈಭವೀಕರಣ ಇಲ್ಲ ಅಂತ ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿ ಇಂದು ಹಿಂದೆಂದೂ ಯಾವ ಮಹಾಪುರುಷರೂ ಮಾಡದಷ್ಟು ದೊಡ್ಡ ಮಟ್ಟದಲ್ಲಿ ಉತ್ಸವ ಮಾಡಿಕೊಳ್ಳಲು ಹೊರಟಿದ್ದಾರೆ ಎಂದರು. ಸಿದ್ದರಾಮಯ್ಯ ಖಂಡಿತವಾಗಿಯೂ ಮುಸ್ಲಿಂ ಪ್ರಾಬಲ್ಯವಿರುವ ಸ್ಥಳದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಇಲ್ಲದಿದ್ದಾರೆ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.
Advertisement