ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆ: ಹನುಮಂತ ಆರ್.ನಿರಾಣಿ ಗೆಲುವು

ವಿಧಾನ ಪರಿಷತ್ ಚುನಾವಣೆ ವಾಯುವ್ಯ ಪದವೀಧರ ಕ್ಷೇತ್ರ ದಾಖಲೆ ಗೆಲುವಿಗೆ ಸಾಕ್ಷಿಯಾಗಿದೆ. ಸಚಿವ ಮುರುಗೇಶ್ ನಿರಾಣಿ ಅವರ ಸಹೋದರ ಹಣಮಂತ ನಿರಾಣಿ ದಾಖಲೆಯ 34,693 ಮತಗಳ ಅಂತರದಿಂದ ಗೆದ್ದಿದ್ದಾರೆ.
ಹನಮಂತ ನಿರಾಣಿ ಗೆಲುವು
ಹನಮಂತ ನಿರಾಣಿ ಗೆಲುವು

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ವಾಯುವ್ಯ ಪದವೀಧರ ಕ್ಷೇತ್ರ ದಾಖಲೆ ಗೆಲುವಿಗೆ ಸಾಕ್ಷಿಯಾಗಿದೆ. ಸಚಿವ ಮುರುಗೇಶ್ ನಿರಾಣಿ ಅವರ ಸಹೋದರ ಹಣಮಂತ ನಿರಾಣಿ ದಾಖಲೆಯ 34,693 ಮತಗಳ ಅಂತರದಿಂದ ಗೆದ್ದಿದ್ದಾರೆ. 

ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ಹಾಗೂ ಸಹೋದರ ಹಣಮಂತ ಆರ್ ನಿರಾಣಿ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಸಂಕೇತವಾಗಿದೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.

ಕಾರ್ಯಕರ್ತರ ಅವಿರತ ಪರಿಶ್ರಮಗಳ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು, ಶಾಸಕರು ಮತ್ತು ಎಲ್ಲಾ ನಾಯಕರ ಮೇಲೆ ವಿಶ್ವಾಸವಿಟ್ಟು ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.

ಚುನಾವಣೆ ಫಲಿತಾಂಶವು ಜನರಿಗೆ, ಜನಪರ ಆಡಳಿತಕ್ಕೆ ಸಂದ ಯಶಸ್ಸು. ಸರ್ಕಾರದ ಕಾರ್ಯಕ್ರಮಗಳಿಗೆ, ಪಕ್ಷದ ಸಂಘಟಿತ ಚುನಾವಣಾ ಹೋರಾಟಕ್ಕೆ ಸಿಕ್ಕ ಮನ್ನಣೆಯೆಂದು ನಿರಾಣಿ ಬಣ್ಣಿಸಿದ್ದಾರೆ.

ಜಾತಿ, ಧರ್ಮ, ಹಣ - ಇಂತಹ ಯಾವುದೇ ದೌರ್ಬಲ್ಯಕ್ಕೆ ಬಲಿಯಾಗದೆ ನಮ್ಮ ಸರ್ಕಾರದ ಸಾಧನೆ, ಪಕ್ಷದ ಸಿದ್ಧಾಂತ ಮತ್ತು ಅಭ್ಯರ್ಥಿಗಳ ಅರ್ಹತೆ ಗುರುತಿಸಿ ಗೆಲ್ಲಿಸಿದ ಮತದಾರರಿಗೆ ಶರಣು ಎಂದು ನಿರಾಣಿ ಅವರು ಹೇಳಿದ್ದಾರೆ. ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವಾಯುವ್ಯ ಕ್ಷೇತ್ರದ ಜನರು ಸ್ವಾಭಿಮಾನಿಗಳೆಂದು ತೋರಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅನೇಕ ನಾಯಕರು ಬಂದು ಪ್ರಚಾರ ಮಾಡಿದರೂ ಅದನ್ನು ಲೆಕ್ಕಿಸದೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಸಚಿವ ನಿರಾಣಿ ಅವರು ತಿಳಿಸಿದ್ದಾರೆ.

ವಾಯವ್ಯ ಪದವೀಧರ ಮತ ಕ್ಷೇತ್ರದ ಅಂತಿಮ ಫಲಿತಾಂಶ ಬುಧವಾರ ಮಧ್ಯರಾತ್ರಿ ಹೊರ ಬಿತ್ತು. ಈ ವೇಳೆ ಬಿಜೆಪಿಯ ಹಣಮಂತ ನಿರಾಣಿ 44,815 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಸುನೀಲ್ ಸಂಕ 10,122 ಮತ ಪಡೆದರು. ಇನ್ನು ತಿರಸ್ಕೃತ ಮತಗಳೇ 9,006 ಇದ್ದವು. ಒಟ್ಟು ಚಲಾವಣೆಯಾದ ಮತಗಳು 65.922. ಈ ಲೆಕ್ಕಾಚಾರ ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರು 34,693 ಮತಗಳ ಅಂತರದಿಂದ ಐತಿಹಾಸಿಕ ದಾಖಲೆ ಗೆಲವು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com