9ನೇ ದಿನಕ್ಕೆ ಉತ್ಸಾಹದಿಂದ ಕಾಲಿಟ್ಟ ಕಾಂಗ್ರೆಸ್ ನ 'ಭಾರತ್ ಜೋಡೋ' ಯಾತ್ರೆ: ತುಮಕೂರಿನಲ್ಲಿ ಜೆಡಿಎಸ್ ಶಾಸಕ ಭಾಗಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ 8ನೇ ದಿನವಾದ ನಿನ್ನೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೈರು ನಡುವೆಯೂ ಕಾರ್ಯಕರ್ತರು ಮತ್ತು  ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ.
ಭಾರತ್ ಜೋಡೋ ಯಾತ್ರೆ
ಭಾರತ್ ಜೋಡೋ ಯಾತ್ರೆ

ಮೈಸೂರು/ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ 8ನೇ ದಿನವಾದ ನಿನ್ನೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೈರುಹಾಜರಾಗಿದ್ದರೂ ಕಾರ್ಯಕರ್ತರು ಮತ್ತು  ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಆದಿಚುಂಚನಗಿರಿ ಮಠದ ಬಳಿಯ ಮೈದಾನದಲ್ಲಿ ತಂಗಲು ನಾಗಮಂಗಲದಿಂದ ಬೆಳ್ಳೂರು ಕ್ರಾಸ್‌ವರೆಗೆ 20 ಕಿ.ಮೀ ಪಾದಯಾತ್ರೆ ಮಾಡಿಕೊಂಡು ಬಂದಿದ್ದರು. 

ಡಿ ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಪಾದಯಾತ್ರೆಗೆ ವಿರಾಮ ತೆಗೆದುಕೊಂಡರು. ಇದು ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ಕುಗ್ಗಿಸಲಿಲ್ಲ. ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಮಾಜದ ವಿವಿಧ ಕ್ಷೇತ್ರಗಳ ಹಲವಾರು ಜನರೊಂದಿಗೆ ಮಾತನಾಡಿದರು. ‘ಕರುಣೆ ಒಂದಾಗಬಲ್ಲದು’ ಎಂಬ ಯಾತ್ರೆಗೂ ಮುನ್ನ ಜನರೊಂದಿಗೆ ಮನಮುಟ್ಟುವಂತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದ ಅವರ ಮಾತನ್ನು ಅನುಸರಿಸಿದಂತೆ ಕಾಣುತ್ತಿತ್ತು. ಭಾರತ ಮಾತೆಯ ವೇಷ ಹಾಕಿಕೊಂಡು ಬಂದ ಬಾಲಕಿ ಜೊತೆ ಫೋಟೋ ತೆಗೆದುಕೊಂಡರು. ಪಾರಾ-ಅಥ್ಲಿಟ್ ಗಳು ಭಾಗಿಯಾಗಿದ್ದರು. 

ಭಾರತ್ ಜೋಡೋ ಯಾತ್ರೆಯಲ್ಲಿ ಜಾನಪದ ಕಲಾವಿದರು ಕೂಡ ಹೆಜ್ಜೆ ಹಾಕಿದರು. ಇನ್ನು ನಿನ್ನೆಯ ಯಾತ್ರೆಯಲ್ಲಿ ಕವಿತಾ ಲಂಕೇಶ್ ಮತ್ತು ಅವರ ತಾಯಿ ಭಾಗವಹಿಸಿದ್ದು ವಿಶೇಷವಾಗಿತ್ತು.ಯಾತ್ರೆಯನ್ನು ನಿರಂಕುಶ ಮತ್ತು ವಿಭಜಕ ಶಕ್ತಿಗಳ ವಿರುದ್ಧದ ಹೋರಾಟ ಎಂದು ಕರೆದಿರುವ ರಾಹುಲ್ ಗಾಂಧಿ, ಗೌರಿ ಲಂಕೇಶ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಶುಕ್ರವಾರ ನಾಗಮಂಗಲದಿಂದ ಮಂಡ್ಯ ಜಿಲ್ಲೆಯ ಬೆಳ್ಳೂರಿನವರೆಗೆ ನಡೆದ ಯಾತ್ರೆಯಲ್ಲಿ ಇವರೂ ಸೇರಿಕೊಂಡರು.

ಗೌರಿ ಸತ್ಯ, ಧೈರ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ನಿಂತರು. ಭಾರತದ ನಿಜವಾದ ಆತ್ಮವನ್ನು ಪ್ರತಿನಿಧಿಸುವ ಗೌರಿ ಲಂಕೇಶ್ ಮತ್ತು ಅವರಂತಹ ಅಸಂಖ್ಯಾತ ಇತರರ ಪರವಾಗಿ ನಾನು ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ ಅವರು, ಯಾತ್ರೆಯು ಅವರ ಧ್ವನಿಯಾಗಿದ್ದು, ಅದನ್ನು ಎಂದಿಗೂ ಮೌನಗೊಳಿಸಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. 

ಇಂದು ತುಮಕೂರಿನಲ್ಲಿ ಯಾತ್ರೆ: ಕರ್ನಾಟಕದಲ್ಲಿ 9ನೇ ದಿನಕ್ಕೆ ಇಂದು ಶನಿವಾರ ಕಾಲಿಟ್ಟಿರುವ ಯಾತ್ರೆ ಬೆಳಗ್ಗೆ ತುಮಕೂರಿನ ಮಾಯಸಂದ್ರದಲ್ಲಿ ಆರಂಭವಾಗಿದೆ. ಇಂದಿನ ಯಾತ್ರೆಯಲ್ಲಿ ತುಮಕೂರಿನ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿ ದಳಪತಿಗಳಿಗೆ ಶಾಕ್ ನೀಡಿದ್ದಾರೆ.

ಇಂದು ಅಪರಾಹ್ನ 3 ಗಂಟೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನತಾಮಿತ್ರ ಸಮಾರೋಪ ಸಮಾವೇಶ ನಡೆಯುತ್ತಿರುವ ಹೊತ್ತಿನಲ್ಲಿ ಜೆಡಿಎಸ್ ನ ಮತ್ತೊಬ್ಬ ನಾಯಕ ಬಂಡಾಯವೆದ್ದಿದ್ದು ಪಕ್ಷಕ್ಕೆ ಆಘಾತವನ್ನುಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com